ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ನ ಶರವಣ ಶ್ರೀಮಂತ ಅಭ್ಯರ್ಥಿ

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯಲಿರುವ ಚುನಾವಣೆಯಲ್ಲಿ ಕಣದಲ್ಲಿರುವ ಏಳು ಅಭ್ಯರ್ಥಿಗಳ ಪೈಕಿ, ಜೆಡಿಎಸ್ನ ಟಿ.ಎ. ಶರವಣ ಅತ್ಯಂತ ಶ್ರೀಮಂತ ಅಭ್ಯರ್ಥಿ. ನಂತರದ ಸ್ಥಾನದಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ ಇದ್ದಾರೆ.
ಶರವಣ ಅವರು ಸುಮಾರು ₹ 41.55 ಕೋಟಿಯ ಆಸ್ತಿ ಘೋಷಿಸಿದರೆ, ಲಕ್ಷ್ಮಣ ಸವದಿ ತಮ್ಮ ಬಳಿ ಸುಮಾರು ₹ 36.37 ಕೋಟಿ ಆಸ್ತಿ ಇರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ತಾವು ₹ 8 ಕೋಟಿಯ ಸಾಲ ಹೊಂದಿದ್ದು, ಕುಟುಂಬದ ಬಳಿ ₹ 10.98 ಕೋಟಿ ಮೌಲ್ಯದ ಚರಾಸ್ತಿ ಇದೆ. ಅದರಲ್ಲಿ ₹ 89 ಲಕ್ಷ ಮೌಲ್ಯದ ಆಭರಣ ಗಳಿವೆ ಎಂದು ಶರವಣ ತಿಳಿಸಿದ್ದಾರೆ. ₹ 6.48 ಕೋಟಿಯ ಚರಾಸ್ತಿ ಹೊಂದಿರುವ ಸವದಿ, ₹ 1.81 ಕೋಟಿ ಸಾಲವೂ ಎಂದು ಘೋಷಿಸಿಕೊಂಡಿದ್ದಾರೆ.
ಉಳಿದಂತೆ ಕಾಂಗ್ರೆಸ್ನ ನಾಗರಾಜ್ ಯಾದವ್ ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ಸುಮಾರು ₹ 7.20 ಕೋಟಿ ಆಸ್ತಿ ಹೊಂದಿದ್ದರೆ, ಅದೇ ಪಕ್ಷದ ಅಬ್ದುಲ್ ಜಬ್ಬಾರ್ ಅವರು ₹ 6.95 ಕೋಟಿ ಆಸ್ತಿ ಹೊಂದಿದ್ದಾರೆ. ನಾಗರಾಜ್ ಅವರು ₹ 3.10 ಲಕ್ಷ ಮತ್ತು ಜಬ್ಬಾರ್ ₹ 71.36 ಲಕ್ಷ ಸಾಲ ಇದೆ ಎಂದೂ ತಿಳಿಸಿದ್ದಾರೆ.
ಬಿಜೆಪಿಯ ಕೇಶವ ಪ್ರಸಾದ್ ₹ 4.04 ಕೋಟಿ, ಛಲವಾದಿ ನಾರಾಯಣಸ್ವಾಮಿ ₹ 6.33 ಕೋಟಿ, ಹೇಮಲತಾ ನಾಯಕ್ ₹ 70.80 ಲಕ್ಷದ ಆಸ್ತಿ ಇದೆ. ಈ ಪೈಕಿ ಕೇಶವ ಪ್ರಸಾದ್ ₹ 13.50 ಲಕ್ಷ ಸಾಲ ಹೊಂದಿದ್ದರೆ, ಉಳಿದವರು ಯಾವುದೇ ಸಾಲ ಇಲ್ಲ ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.