ಬೆಂಗಳೂರು: ನಗರದ ದೇವನಹಳ್ಳಿ ಬಳಿಯ ರೆಸಾರ್ಟ್ವೊಂದರಲ್ಲಿ ವಾಸ್ತವ್ಯ ಹೂಡಿದ್ದ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಸೋಮವಾರ ತಮಿಳುನಾಡು ತಲುಪಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಅವರು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಅಲ್ಲಿಂದ ಬಿಡುಗಡೆಯಾಗಿ ವಿಶ್ರಾಂತಿ ಪಡೆಯಲು ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದರು.
ಶಶಿಕಲಾ ಸ್ವಾಗತಿಸಲು ಸೋಮವಾರ ಬೆಳಿಗ್ಗೆ ರೆಸಾರ್ಟ್ ಎದುರು ಎಐಎಡಿಎಂಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬೆಂಬಲಿಗರ 200ಕ್ಕೂ ಹೆಚ್ಚು ಕಾರುಗಳಿದ್ದವು. ಶಶಿಕಲಾ ರೆಸಾರ್ಟ್ನಿಂದ ಹೊರಬಂದು ತಮ್ಮ ಕಾರು ಏರಿ ಹೊರಟರು.
ದೇವನಹಳ್ಳಿ, ಯಲಹಂಕ, ಹೆಬ್ಬಾಳ, ಟಿನ್ ಫ್ಯಾಕ್ಟರಿ, ಸಿಲ್ಕ್ ಬೋರ್ಡ್ ಜಂಕ್ಷನ್, ಹೊಸೂರು ರಸ್ತೆ, ಅತ್ತಿಬಲೆ ಗಡಿ ಮೂಲಕ ಶಶಿಕಲಾ ಕಾರು ತಮಿಳುನಾಡಿಗೆ ಹೋಯಿತು. ಮುಖಂಡರು ಹಾಗೂ ಕಾರ್ಯಕರ್ತರು, ಶಶಿಕಲಾ ಕಾರು ಹಿಂಬಾಲಿಸಿದರು. ಈ ಮಾರ್ಗದಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗಿ, ಸಾರ್ವಜನಿಕರ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ರಾಜ್ಯದ ಗಡಿಯವರೆಗೂ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪೊಲೀಸರು, ಶಶಿಕಲಾ ಕಾರಿಗೆ ಭದ್ರತೆ ಒದಗಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.