ಬೆಂಗಳೂರು: ವಿಶ್ವ ಜಲ ದಿನವನ್ನು ವಿನೂತನವಾಗಿ ಆಚರಿಸುವ ಉದ್ದೇಶದಿಂದ, ಬೆಂಗಳೂರು ಜಲಮಂಡಳಿ ‘ಗ್ರೀನ್ ಸ್ಟಾರ್ ಚಾಲೆಂಜ್’ ಸ್ಪರ್ಧೆ ಆಯೋಜಿಸಿದ್ದು, 30 ದಿನಗಳಲ್ಲಿ ಪಂಚಸೂತ್ರ ಅಳವಡಿಸಿಕೊಂಡ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಿಗೆ ‘ಗ್ರೀನ್ ಸ್ಟಾರ್’ ನೀಡಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮಪ್ರಸಾತ್ ಮನೋಹರ್ ತಿಳಿಸಿದರು.
ಶಾಂಗ್ರಿಲಾ ಹೋಟೆಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ನೀರು ಉಳಿತಾಯ ಮಾಡುವ ಏರಿಯೇಟರ್ಗಳನ್ನು ಅಳವಡಿಸುವ ಮೂಲಕ ‘ಗ್ರೀನ್ ಸ್ಟಾರ್ ಚಾಲೆಂಜ್’ಗೆ ಚಾಲನೆ ನೀಡಿದರು.
ಪಂಚ ಸೂತ್ರಗಳು: ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನ ಅಳವಡಿಕೆ, ಸಂಸ್ಕರಿಸಿದ ನೀರಿನ ಬಳಕೆ ಹೆಚ್ಚಿಸಿಕೊಳ್ಳುವುದು, ಕೊಳವೆಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ, ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸುವುದು– ಈ ಎಲ್ಲ ಹೊಸ ಅನುಷ್ಠಾನಗಳ ಬಗ್ಗೆ ಗ್ರಾಹಕರು ಹಾಗೂ ಸಿಬ್ಬಂದಿಗೆ ಮಾಹಿತಿಯನ್ನು ಕೊಡುವ ಮೂಲಕ ನೀರಿನ ಉಳಿತಾಯದ ಮಹತ್ವ ಸಾರುವುದು. ಈ ಪಂಚಸೂತ್ರಗಳನ್ನು ಅಳವಡಿಸಿಕೊಂಡರೆ ‘ಫೈವ್ ಸ್ಟಾರ್ ಗ್ರೀನ್ ರೇಟಿಂಗ್’ ನೀಡಲಾಗುತ್ತದೆ ಎಂದು ರಾಮಪ್ರಸಾದ್ ಘೋಷಿಸಿದರು.
ತಂತ್ರಜ್ಞಾನದ ಅಸ್ತ್ರ: ಬೆಂಗಳೂರು ಹಾಗೂ ನಾಡಿನ ಎಲ್ಲೆಡೆ ಎದುರಾಗಿರುವ ಜಲಕ್ಷಾಮದ ವಿರುದ್ಧ ಹೊಸ ತಂತ್ರಜ್ಞಾನದ ಅಸ್ತ್ರ ಬಳಸುವಂತೆ ಯುವ ವಿಜ್ಞಾನಿಗಳಿಗೆ ಕರೆ ನೀಡಿದರು.
ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿರುವ ಸತೀಶ್ ಧವನ್ ಸಭಾಂಗಣದಲ್ಲಿ ‘ಬೆಂಗಳೂರು ಎಕೊ ಸಮಿಟ್– 2024’ ಉದ್ಘಾಟಿಸಿ ಅವರು ಮಾತನಾಡಿದರು.
‘ಯಾವುದೇ ಸಮಸ್ಯೆಯನ್ನು ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಬಗೆಹರಿಸಲು ಸಾಧ್ಯ ಎನ್ನುವ ಆಲೋಚನೆಗೆ ಪುಷ್ಟಿ ನೀಡಿದ್ದು ಈ ಸಂಸ್ಥೆ. ಜನರು ತಮ್ಮ ದೈನಂದಿನ ನೀರಿನ ಬಳಕೆಯಲ್ಲಿ ಆಗಬಹುದಾದ ಅಪವ್ಯಯವನ್ನು ತಪ್ಪಿಸಬೇಕು. ಅಲ್ಲದೆ ಹೊಸ ತಂತ್ರಜ್ಞಾನಗಳ ಬಳಕೆಯ ಮೂಲಕ ಜಲಕ್ಷಾಮವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಜ್ಜಾಗಬೇಕು’ ಎಂದರು.
‘ನೀರು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ಬಳಕೆಯನ್ನು ಮಿತಗೊಳಿಸುವ ಮೂಲಕ ಮುಂದಿನ ಪೀಳಿಗೆಗೂ ಅವುಗಳು ಲಭ್ಯವಾಗುವ ನಿಟ್ಟಿನಲ್ಲಿ ಜನರು ಜಾಗೃತಿಗೊಳ್ಳಬೇಕು. ನಗರದಲ್ಲಿ ಅಂತರ್ಜಲದ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ಅಂತರ್ಜಲ ಮಟ್ಟ ಕುಸಿಯುತ್ತಲೇ ಸಾಗಿದೆ. ನೀರಿನ ಮರುಪೂರಣ ಹೆಚ್ಚಿಸುವಲ್ಲಿ ಯುವ ವಿಜ್ಞಾನಿಗಳು ಹೊಸ ತಂತ್ರಜ್ಞಾನ ಆವಿಷ್ಕಾರಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.