ಬೆಂಗಳೂರು: ‘ಕೇಂದ್ರ ಸರ್ಕಾರ ಪೆಟ್ರೋಲ್ ದರವನ್ನು ಪ್ರತಿ ಲೀಟರ್ಗೆ ₹60 ಹಾಗೂ ಡೀಸೆಲ್ ದರ ₹ 50ಕ್ಕೆ ಇಳಿಸಬೇಕು’ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ತಾಹಿರ್ ಹುಸೇನ್ ಆಗ್ರಹಿಸಿದರು.
‘ತೈಲ ದರವನ್ನು ತುಸು ಇಳಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೀಪಾವಳಿ ಬಂಪರ್ ಗಿಫ್ಟ್ ಎಂದು ಬೆನ್ನು ತಟ್ಟಿಕೊಳ್ಳುತ್ತಿವೆ. ಈ ದರ ಇಳಿಕೆಯಿಂದ ಗ್ರಾಹಕರಿಗೆ ಯಾವುದೇ ಅನುಕೂಲವಿಲ್ಲ. ನಿರಂತರವಾಗಿ ದರ ಏರಿಸಿ ಈಗ ಸ್ವಲ್ಪ ಪ್ರಮಾಣದಲ್ಲಿ ತಗ್ಗಿಸಿ ಜನರ ಕಣ್ಣೊರೆಸುವ ನಾಟಕ ಆಡುತ್ತಿವೆ’ ಎಂದು ದೂರಿದರು.
‘ಕೋವಿಡ್ನಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು ಇದುವರೆಗೆ ಚೇತರಿಸಿಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ಜನರಿಗೆ ಆಸರೆಯಾಗಬೇಕಿದ್ದ ಸರ್ಕಾರಗಳು ಅಗತ್ಯ ವಸ್ತುಗಳ ದರ ಏರಿಸಿ, ಜನವಿರೋಧಿ ನೀತಿ ಅನುಸರಿಸುತ್ತಿವೆ’ ಎಂದರು.
‘ಎಲ್ಲ ಕುಟುಂಬಗಳಿಗೆ ತಲಾ 35 ಕೆ.ಜಿಗಳಷ್ಟು ಪಡಿತರ ವಿತರಿಸಬೇಕು. ಅಗತ್ಯ ವಸ್ತುಗಳ ದರ ಏರಿಕೆ ನಿಲ್ಲಿಸಿ,ಅಡುಗೆ ಅನಿಲಕ್ಕೆ ಸಬ್ಸಿಡಿ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.