ಬೆಂಗಳೂರು: ವೈಟ್ಫೀಲ್ಡ್– ಬಾಣಸ ವಾಡಿ ನಡುವೆ ಸಂಚರಿಸಲಿರುವ ಡೀಸೆಲ್–ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (ಡೆಮು) ವಿಶೇಷ ರೈಲಿಗೆ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಸಂಸದ ಪಿ.ಸಿ. ಮೋಹನ್ ಭಾನುವಾರ ಚಾಲನೆ ನೀಡಿದರು.
‘ಈ ರೈಲನ್ನು ಯಶವಂತಪುರ ದವರೆಗೆ ವಿಸ್ತರಿಸಬೇಕು. ಯಶವಂತ ಪುರ– ವೈಟ್ಫೀಲ್ಡ್ ನಡುವೆ ಸಂಚರಿಸುವವರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದಾರೆ. ಟ್ವಿಟರ್ ಮೂಲ ಕವೂ ಕೆಲವರು ಈ ಬಗ್ಗೆ ಒತ್ತಾಯಿಸಿದ್ದಾರೆ. ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಸಂಬಂಧಿಸಿ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಿಕೊಂಡು ರೈಲನ್ನು ಯಶವಂತಪುರದವರೆಗೆ ವಿಸ್ತರಿಸಲಾಗುವುದು' ಎಂದು ಅವರು ಹೇಳಿದರು.
‘ಉಪನಗರ ರೈಲು ಇಂದಿನ ಅಗತ್ಯ. ಈ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಯೋಜನೆ ಜಾರಿಗೆ ಪ್ರಯತ್ನಿಸಿದ್ದೆ. ಆದರೆ, ರಾಜ್ಯ ಸರ್ಕಾರವೂ ಈ ವಿಚಾರದಲ್ಲಿ ಕಾಳಜಿ ತೋರಬೇಕು. ದಟ್ಟಣೆ ನಿವಾರಣೆ ಮತ್ತು ತ್ವರಿತ ಸಂಚಾರದ ಹಿತದೃಷ್ಟಿಯಿಂದ ಈ ಯೋಜನೆ ಜಾರಿಯಾಗಬೇಕು’ ಎಂದು ಅವರು ಹೇಳಿದರು.
ಶಾಸಕ ಎಸ್.ರಘು, ನೈಋತ್ಯ ರೈಲ್ವೆಯ ವಿಭಾಗೀಯ ವ್ಯವಸ್ಥಾಪಕ ಆರ್.ಎಸ್. ಸಕ್ಸೇನಾ, ಪಾಲಿಕೆ ಸದಸ್ಯರಾದ ಶಶಿರೇಖಾ ಮುಕುಂದ್ ಮತ್ತು ಅರುಣಾ ರವಿ ಇದ್ದರು.