ಬೆಂಗಳೂರು: ‘ಇಲ್ಲಿಯವರೆಗೆ ನಾವು ಪರೀಕ್ಷೆಗಳ ಯುಗದಲ್ಲಿ ಜೀವಿಸಿದ್ದೇವು. ಸದ್ಯ ಮೌಲ್ಯಮಾಪನ ಯುಗದಲ್ಲಿದ್ದೇವೆ. ಈಗ ಅವಲೋಕನ ಯುಗದತ್ತನಾವು ಸಾಗಬೇಕಾಗಿದೆ’ ಎಂದು‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ’ ಸಮಿತಿ ಸದಸ್ಯ ಪ್ರೊ.ಎಂ.ಕೆ.ಶ್ರೀಧರ್ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನೈರುತ್ಯ ವಿಭಾಗವು ಸೋಮವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ‘ಉನ್ನತ ಶಿಕ್ಷಣದಲ್ಲಿ ಮೌಲ್ಯಮಾಪನಾ ಸುಧಾರಣೆಗಳು’ ಕುರಿತುಉಪನ್ಯಾಸ ನೀಡಿದರು.
‘ಪೋಷಕರು ಮಕ್ಕಳಿಗೆ ಶಿಕ್ಷಣದ ಬಗ್ಗೆ ಹೆಚ್ಚಾಗಿ ಸಲಹೆ ನೀಡುವುದಿಲ್ಲ. ಆದರೆ, ಭವಿಷ್ಯದಲ್ಲಿ ಮಾಡಬೇಕಾದ ಸಾಧನೆಗಳ ಬಗ್ಗೆ ಮಾತ್ರ ಹೆಚ್ಚಾಗಿ ವಿಷಯ ತುಂಬುತ್ತಾರೆ. ಅವರ ಭವಿಷ್ಯ ನಿರ್ಧರಿಸುತ್ತಾರೆ ಹೊರತು ಪ್ರಸ್ತುತ ಸ್ಥಿತಿಗತಿಗಳನ್ನೇ ಮರೆತಿರುತ್ತಾರೆ’ ಎಂದರು.
‘ಹೊಸ ಶಿಕ್ಷಣ ನೀತಿಯಲ್ಲಿ ಮೌಲ್ಯಮಾಪನದ ಬಗ್ಗೆ ಉಲ್ಲೇಖ ಮಾಡಿಲ್ಲ. ಮೌಲ್ಯಮಾಪನ ಪದವನ್ನೂ ಹೆಚ್ಚು ಬಳಕೆ ಮಾಡಿಲ್ಲ. ಒಂದು ಅಧ್ಯಾಯದಲ್ಲಿ ಕಲಿಕೆಯ ವಾತಾವರಣ ಸೃಷ್ಟಿಸುವ ಕುರಿತ ಅಂಶಗಳಿವೆ. ಇದು ಮೌಲ್ಯಮಾಪನದ ಜೊತೆಗೆ ಸಂಪರ್ಕ ಕಲ್ಪಿಸುತ್ತದೆ’ ಎಂದರು.
ಶಿಕ್ಷಣ ನೀತಿಯ ಉದ್ದೇಶಪರೀಕ್ಷೆ ಹಾಗೂ ಮೌಲ್ಯಮಾಪನಕ್ಕೆ ಹೆಚ್ಚು ಒತ್ತು ನೀಡುವುದಲ್ಲ.ಬದಲಾಗಿ, ವಿದ್ಯಾರ್ಥಿಗಳ ಕಲಿಕೆ ವಾತಾವರಣ ನಿರ್ಮಿಸುವುದಾಗಿದೆ. ಪರೀಕ್ಷೆ, ಮೌಲ್ಯಮಾಪನ ಹಾಗೂ ಅವಲೋಕನ ಈ ಮೂರು ವಿಷಯಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಈ ಶಿಕ್ಷಣ ನೀತಿ ಪ್ರಯತ್ನಿಸಿದೆ’ ಎಂದು ವಿವರಿಸಿದರು.
ಯುಜಿಸಿ ಕಾರ್ಯದರ್ಶಿ ಪ್ರೊ.ರಜನೀಶ್ ಜೈನ್, ‘ಶಿಕ್ಷಣ ವ್ಯವಸ್ಥೆಯಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳ ಬಗ್ಗೆ ದೇಶದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆಗೆ ಚರ್ಚೆ ನಡೆಸಲಾಗಿದೆ. ಅದರ ವಿವರ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿದೆ’ ಎಂದರು.