ಬೆಂಗಳೂರು: ಯಲಹಂಕ ವಲಯದ ದೊಡ್ಡಬೊಮ್ಮಸಂದ್ರ ಕೆರೆಯು ಒಟ್ಟು 124 ಎಕರೆ 19 ಗುಂಟೆ ವಿಸ್ತೀರ್ಣದಲ್ಲಿದ್ದು, ಕೆರೆ ಅಂಗಳದ ಕೋಡಿಯ ಮುಂಭಾಗ ಒತ್ತುವರಿ ಮಾಡಲು ಯತ್ನಿಸಿದ್ದ 12 ಗುಂಟೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ.
ಸುಮಾರು ₹ 8 ಕೋಟಿ ಮಾರುಕಟ್ಟೆ ಮೌಲ್ಯವಿರುವ ಈ ಜಾಗದ ಸುತ್ತಲೂ ಕಾಂಕ್ರೀಟ್ ತಡೆ
ಗೋಡೆ, ತಂತಿ ಬೇಲಿ ಅಳವಡಿಸುವ ಕಾರ್ಯವನ್ನು ಬಿಬಿಎಂಪಿ ಆರಂಭಿಸಿದೆ.
ತಾಲ್ಲೂಕು ಭೂಮಾಪಕರು ಹಾಗೂ ತಹಶೀಲ್ದಾರರು ಸರ್ವೇ ನಡೆಸಿ ನೀಡಿದ್ದ ಗಡಿ ಗುರುತು ನಕ್ಷೆಯಂತೆ ಕೆರೆಯ ಉತ್ತರ ಪೂರ್ವ ಭಾಗದ ಕೋಡಿಯ ಬಳಿ ಕಾಂಕ್ರೀಟ್ ಕಂಬಗಳನ್ನು ನೆಟ್ಟು ತಂತಿ ಬೇಲಿ ನಿರ್ಮಿಸಲಾಗಿತ್ತು. ಆದರೆ, ಯಲಹಂಕ ಹೋಬಳಿಯ ತಿಂಡ್ಲು ಗ್ರಾಮದ ಸರ್ವೇ ನಂಬರ್ 53, ದೊಡ್ಡಬೊಮ್ಮಸಂದ್ರ ಗ್ರಾಮದ ಸರ್ವೇ ನಂಬರ್ 56 ಹಾಗೂ ಕೊಡಿಗೇಹಳ್ಳಿ ಗ್ರಾಮದ ಸರ್ವೇ ನಂಬರ್ 175ರಲ್ಲಿ ದೊಡ್ಡಬೊಮ್ಮಸಂದ್ರ ಕೆರೆ ಅಂಗಳದ ತಂತಿಬೇಲಿಯನ್ನು ಸ್ಥಳೀಯರಾದ ಶ್ರೀನಿವಾಸ್ ಎಂಬವರು ಒತ್ತುವರಿ ಮಾಡಿಕೊಂಡಿದ್ದರು. ಈ ಜಾಗದಲ್ಲಿ 2020ರ ಆಗಸ್ಟ್ನಲ್ಲಿ ಗಣೇಶ ವಿಗ್ರಹವನ್ನು ತಂದು ಇಟ್ಟಿದ್ದರು. 2020ರ ಡಿಸೆಂಬರ್ನಲ್ಲಿ ನೀರಿನ ಟ್ಯಾಂಕ್ ಹಾಗೂ ಕಟ್ಟಡ ನಿರ್ಮಿಸಿ ಕೆರೆ ಅಂಗಳದ ಕೆರೆಯ ಕೋಡಿಯ ಮುಂಭಾಗದ 12 ಗುಂಟೆ ಜಮೀನನ್ನು ಕಬಳಿಸಲು ಮುಂದಾಗಿದ್ದರು ಎಂದು ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಒತ್ತುವರಿ ಜಮೀನನ್ನು, ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದಂತೆ ಸರ್ಕಾರ ಮತ್ತೆ ಸ್ವಾಧೀನಪಡಿಸಿಕೊಂಡಿದೆ.
ಒತ್ತುವರಿದಾರರಿಗೆ ನೋಟೀಸ್: ಭೂದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಯಲಹಂಕ ತಾಲ್ಲೂಕು ಕಚೇರಿಯ ತಾಲ್ಲೂಕು ಭೂಮಾಪಕರು ಜೂನ್ 12ರಂದು ತಯಾರಿಸಿರುವ ಸರ್ವೆ ನಕ್ಷೆಯಲ್ಲಿ ತಿಳಿಸಿರುವಂತೆ ಒಟ್ಟು 36 ಗುಂಟೆ ಪ್ರದೇಶ ಒತ್ತುವರಿಯಾಗಿದೆ. ಈ ಬಗ್ಗೆ ವರದಿ ನೀಡಲು ಯಲಹಂಕ ತಾಲ್ಲೂಕು ಭೂಮಾಪಕರನ್ನು ನಿಯೋಜಿಸಲಾಗಿದೆ. ಎಲ್ಲಾ ಒತ್ತುವರಿದಾರರಿಗೆ ನೋಟೀಸ್ಜಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಉದ್ಯಾನ ನಿರ್ಮಾಣ: ಕೆರೆಯಲ್ಲಿ ಒತ್ತುವರಿ ಮಾಡಲು ಯತ್ನಿಸಿದ 12 ಗುಂಟೆ ಪ್ರದೇಶದಲ್ಲಿ ವಾಯುವಿಹಾರಿಗಳ ಅನುಕೂಲಕ್ಕೆ ಮರಗಳ ಉದ್ಯಾನ ನಿರ್ಮಿಸಲಾಗುತ್ತದೆ ಎಂದು ಬಿಬಿಎಂಪಿ
ಯ ಸಹಾಯ ಕಾರ್ಯಪಾಲಕ ಎಂಜಿನಿಯರ್ (ಕೆರೆಗಳು) ಪ್ರಕಾಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.