ಬೆಂಗಳೂರು: ಬದುಕಿದ್ದ ಯುವಕ ಸತ್ತನೆಂದು ಹೇಳಿ ಅಪರಿಚಿತರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಪ್ರಕಟಿಸಿದ್ದು, ಈ ಸಂಬಂಧ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 13ರಂದು ಇನ್ಸ್ಟಾಗ್ರಾಮ್ನಲ್ಲಿ ನಕಲಿ ಖಾತೆ ತೆರದಿದ್ದ ಆರೋಪಿ, ಯುವಕನ ಭಾವಚಿತ್ರ ಸಮೇತ ‘ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪೋಸ್ಟ್ ಪ್ರಕಟಿಸಿದ್ದ. ಅದು ನಿಜವೆಂದು ನಂಬಿದ್ದ ಸ್ನೇಹಿತರು, ಶ್ರದ್ಧಾಂಜಲಿ ಕೋರಿದ್ದರು. ಪೋಸ್ಟ್ ನೋಡಿ ಗಾಬರಿಗೊಂಡ ಯುವಕ ದೂರು ನೀಡಿದ್ದಾರೆ.
ಪೊಲೀಸ್ ವಸತಿ ಗೃಹದಲ್ಲಿ ಮಹಿಳೆ ಸಾವು
ಜಗಜೀವನ್ರಾಮ್ ನಗರ ಠಾಣೆ ವ್ಯಾಪ್ತಿಯಲ್ಲಿರುವ ಪೊಲೀಸ್ ವಸತಿಗೃಹ ಕಟ್ಟಡದ ಐದನೇ ಮಹಡಿಯಿಂದ ಬಿದ್ದು ಯಶೋದಾ (45) ಎಂಬುವರು ಮೃತಪಟ್ಟಿದ್ದಾರೆ.
‘ರಾಜರಾಜೇಶ್ವರಿ ನಗರದ ನಿವಾಸಿ ಆಗಿದ್ದ ಯಶೋದಾ, ಸಂಬಂಧಿಯಾಗಿದ್ದ ಇನ್ಸ್ಪೆಕ್ಟರ್ ಒಬ್ಬರ ಮನೆಗೆ ಬಂದಿದ್ದರು. ಶನಿವಾರ ಮಧ್ಯಾಹ್ನ ಊಟ ಮಾಡಿ ಕಟ್ಟಡದ ಐದನೇ ಮಹಡಿಗೆ ಹೋಗಿದ್ದಾಗ ಈ ದುರ್ಘಟನೆ ನಡೆದಿದೆ’ ಎಂದು ಪೊಲೀಸರು ಹೇಳಿದರು.
‘ತೀವ್ರವಾಗಿ ಗಾಯಗೊಂಡಿದ್ದ ಯಶೋದಾ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಅವರು ಆಯತಪ್ಪಿ ಮಹಡಿಯಿಂದ ಬಿದ್ದಿರುವ ಮಾಹಿತಿ ಇದೆ. ತನಿಖೆ ಮುಂದುವರಿದಿದೆ’ ಎಂದರು.