ಬೆಂಗಳೂರು: ಕುಡಿದ ನಶೆಯಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಕೆ.ಆರ್. ಪುರದಲ್ಲಿ ಪೂರ್ವ ತಾಲ್ಲೂಕಿನ ಹಂಚರಹಳ್ಳಿ ಚರ್ಚ್ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಹಂಚರಹಳ್ಳಿಯ ವಿನಯ್ (32) ಕೊಲೆಯಾದ ಯುವಕ.
ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಮೊದಲ ದಿನವೇ ಸ್ನೇಹಿತರ ಮಧ್ಯೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಮಂಗಳವಾರ ರಾತ್ರಿ ಮತ್ತೆ ಕುಡಿದ ಅಮಲಿನಲ್ಲಿ ಗಲಾಟೆ ನಡೆದಿದ್ದು, ಈ ವೇಳೆ ಆರೋಪಿಗಳು ವಿನಯ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ
ಹಂಚರಹಳ್ಳಿ ಗ್ರಾಮದ ರೌಡಿ ಶೀಟರ್ ಪ್ರಶಾಂತ್, ಮಧು, ಕಟ್ಟುಗೊಲ್ಲಹಳ್ಳಿಯ ರೌಡಿ ಶೀಟರ್ ರಾಜ್ ಕುಮಾರ್ ಕೊಲೆ ಆರೋಪಿಗಳು ಎಂದು ಗುರುತಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಆವಲಹಳ್ಳಿ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.