ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮಂಡಳಿಯಿಂದ ‘ಜೀರೋ ಬ್ಯಾಕ್ಟೀರಿಯಲ್‌’ ನೀರು

ದೇಶೀಯ ತಂತ್ರಜ್ಞಾನದಿಂದ ಸಂಸ್ಕರಣೆ: ಐಐಎಸ್‌ಸಿ ವಿಜ್ಞಾನಿಗಳ ಸಹಯೋಗ
Published 30 ಏಪ್ರಿಲ್ 2024, 16:20 IST
Last Updated 30 ಏಪ್ರಿಲ್ 2024, 16:20 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ಸಹಯೋಗದಲ್ಲಿ ತ್ಯಾಜ್ಯ ನೀರಿನ ಸಂಸ್ಕರಣೆಗೆ ದೇಶೀಯ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಜಲಮಂಡಳಿ, ಪ್ರತಿ ದಿನ ಒಂದು ಕೋಟಿ ಲೀಟರ್‌ ‘ಝೀರೊ ಬ್ಯಾಕ್ಟೀರಿಯಲ್‌’ ನೀರನ್ನು ಸರಬರಾಜು ಮಾಡುತ್ತಿದೆ.

ಪರಿಸರ ಸ್ನೇಹಿ, ಅತ್ಯಾಧುನಿಕ ತಂತ್ರಜ್ಞಾನವನ್ನು ಎರಡು ವಾರಗಳ ಹಿಂದೆ ಅಳವಡಿಸಿಕೊಂಡಿದ್ದ ಜಲಮಂಡಳಿ, ಬ್ಯಾಕ್ಟೀರಿಯಾ ಮುಕ್ತ ನೀರನ್ನು ಪ್ರತಿದಿನವೂ ಪೂರೈಸುತ್ತಿದೆ. ಅಗರ, ಕೆ.ಸಿ. ವ್ಯಾಲಿ ಮತ್ತು ಬೆಳ್ಳಂದೂರು ಎಸ್‌ಟಿಪಿಗಳಲ್ಲಿ ಈ ದೇಶೀಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.

ತ್ಯಾಜ್ಯ ನೀರು ನಿರ್ವಹಣಾ ಘಟಕಗಳ ಮೂಲಸೌಲಭ್ಯಗಳನ್ನು ಬಳಸಿಕೊಂಡು, ಕಡಿಮೆ ವೆಚ್ಚದಲ್ಲಿ ದೇಶೀಯ ತಾಂತ್ರಿಕತೆಯಿಂದ ಅತ್ಯುತ್ತಮ ಗುಣಮಟ್ಟದಲ್ಲಿ ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡುವ ಮೂಲಕ ‘ಝೀರೊ ಬ್ಯಾಕ್ಟೀರಿಯಲ್‌’ ಸಂಸ್ಕರಿಸಿದ ನೀರು ಉತ್ಪಾದಿಸಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳ ಆಧಾರದ ಮೇಲೆ ಬೇರೆ ತಂತ್ರಜ್ಞಾನದ ಮೂಲಕ ಸಂಸ್ಕರಣೆ ಆಗುವಂತಹ ನೀರಿನಲ್ಲಿ ಕೆಲವು ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳು ಇರುತ್ತವೆ. ಈ ‘ಜೀರೋ ಬ್ಯಾಕ್ಟೀರಿಯಲ್‌’ ನೀರಿನಲ್ಲಿ ಯಾವುದೇ ಬ್ಯಾಕ್ಟೀರಿಯಾಗಳೂ ಇರುವುದಿಲ್ಲ. ಆದ್ದರಿಂದ ಈ ನೀರು ಕುಡಿಯುವುದಕ್ಕೆ ಹೊರತುಪಡಿಸಿ ಬೇರೆ ಕಾರಣಗಳಿಗೆ ಯಾವುದೇ ಹಿಂಜರಿಕೆ ಇಲ್ಲದೆ ಬಳಸಬಹುದಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ.ರಾಮ್‌ಪ್ರಸಾತ್‌ ಮನೋಹರ್‌ ಮಾಹಿತಿ ನೀಡಿದ್ದಾರೆ.

ಐಐಎಸ್‌ಸಿಯಿಂದ ದೃಢೀಕರಣ: ಸುಧಾರಿತ ದೇಶೀಯ ತಂತ್ರಜ್ಞಾನ ಅಳವಡಿಕೆಯಿಂದ ಹೊರಬರುವಂತಹ ‘ಜೀರೋ ಬ್ಯಾಕ್ಟೀರಿಯಲ್‌’ ನೀರನ್ನು ಭಾರತೀಯ ವಿಜ್ಞಾನ ಸಂಸ್ಥೆ ಪ್ರಮಾಣೀಕರಿಸಿದೆ. ಎಸ್‌ಟಿಪಿಗಳಿಂದ ಹೊರಬರುವ ನೀರನ್ನು ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ, ಗುಣಮಟ್ಟದ ನೀರು ಎಂದು ದೃಢೀಕರಿಸಿದ್ದಾರೆ.

ಪೂರ್ವಭಾಗದಲ್ಲಿ ಬಳಕೆ: ನಗರ ಪೂರ್ವಭಾಗದಲ್ಲಿರುವ ವಿಪ್ರೊ, ಎಚ್‌ಎಎಲ್‌ ಸೇರಿದಂತೆ ಹಲವಾರು ಐಟಿ ಕಂಪನಿಗಳು ಈಗಾಗಲೇ ‘ಜೀರೋ ಬ್ಯಾಕ್ಟೀರಿಯಲ್‌’ ನೀರಿಗೆ ಬೇಡಿಕೆಯಿಟ್ಟಿದ್ದಾರೆ. ಸ್ವಚ್ಛತೆ, ಏರ್‌ ಕಂಡೀಷನಿಂಗ್‌ ಕೂಲಿಂಗ್ ಸೇರಿದಂತೆ‌ ಹಲವಾರು ಕಾರ್ಯಗಳಿಗೆ ಇದನ್ನು ಬಳಸಬಹುದಾಗಿದೆ. ಬೇಡಿಕೆಯಿರುವ ಸ್ಥಳಗಳಿಗೆ ಜಲಮಂಡಳಿ ಈ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಿದೆ’ ಎಂದು ರಾಮ್‌ಪ್ರಸಾತ್‌ ತಿಳಿಸಿದ್ದಾರೆ.

ಹೊಸ ಮೈಲುಗಲ್ಲು!

‘ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸುವುದರಿಂದ ಕಾವೇರಿ ನೀರಿನ ಮೇಲೆ ಒತ್ತಡವನ್ನು ಬಹಳಷ್ಟು ಕಡಿಮೆ ಮಾಡಬಹುದಾಗಿದೆ. ಈ ಸಂಸ್ಕರಣೆಯಲ್ಲಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಐಐಎಸ್‌ಸಿ ವಿಜ್ಞಾನಿಗಳೂ ಜಲಮಂಡಳಿ ಜೊತೆ ಕೈಜೋಡಿಸಿದ್ದು ‘ಜೀರೋ ಬ್ಯಾಕ್ಟೀರಿಯಲ್‌’ ಗುಣಮಟ್ಟದ ಸಂಸ್ಕರಿಸಿದ ನೀರು ಪಡೆಯಲು ಸಾಧ್ಯವಾಗಿದೆ. ಇದು ಜಲಮಂಡಳಿಯ ಇತಿಹಾಸದಲ್ಲಿ ಹೊಸದೊಂದು ಮೈಲುಗಲ್ಲಾಗಿದೆ. ಸಂಸ್ಕರಿಸಿದ ನೀರಿನ ಬಳಕೆಯಲ್ಲಿ ಜನರ ಮನಃಸ್ಥಿತಿಯನ್ನು ಬದಲಾಯಿಸುವಲ್ಲಿ ಇದು ಸಹಕಾರಿಯಾಗಲಿದೆ’ ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT