‘ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಪೀಯೂಷ್ ಗೋಯಲ್ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಫೆಬ್ರುವರಿ 22ರಂದು ಮನವಿ ಸಲ್ಲಿಸಿತು. ಯೋಜನೆಗೆ ಅಗತ್ಯವಿರುವ ಸಾವಿರಾರು ಕೋಟಿ ಮೊತ್ತದ ರೈಲ್ವೆ ಜಮೀನನ್ನು ಎಕರೆಗೆ ಒಂದು ರೂಪಾಯಿ ಮೊತ್ತಕ್ಕೆ ನೀಡುವುದಾಗಿ ಗೋಯಲ್ ಘೋಷಣೆ ಮಾಡಿದರು. ಈ ನಡುವೆ, ಪ್ರಧಾನಮಂತ್ರಿ ಕಾರ್ಯಾಲಯವು ಕೆ–ರೈಡ್ಸ್ಗೆ ಪತ್ರ ಬರೆದು ಉಪನಗರ ಯೋಜನೆಗೆ ಸಂಬಂಧಿಸಿದಂತೆ ನಗರದ ಮಿತಿಯಲ್ಲಿ ನಿಲ್ದಾಣಗಳನ್ನು ಕಡಿತಗೊಳಿಸುವುದೂ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ವಿಸ್ತೃತಾ ಯೋಜನಾ ವರದಿಯನ್ನು (ಡಿಪಿಆರ್) ಮರುಪರಿಶೀಲಿಸುವಂತೆ ತಿಳಿಸಿದೆ. ಈ ಬೆಳವಣಿಗೆಯಿಂದಾಗಿ, ಯೋಜನೆಯ ಅನುಷ್ಠಾನ ಮತ್ತಷ್ಟು ವಿಳಂಬವಾಗಬಹುದೆಂದು ನಗರದ ನಾಗರಿಕರು ಆತಂಕಗೊಂಡಿದ್ದಾರೆ’ ಎಂದು ಅವರು ಹೇಳಿದರು.