ಬೆಂಗಳೂರು: ‘ಖಾಸಗಿ ಆಸ್ಪತ್ರೆಗಳು ಕೈಗೆಟುಕುವ ದರದಲ್ಲಿ ಸಾಮಾನ್ಯರಿಗೆ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವಂತಾಗಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದಲ್ಲಿ ಮಂಗಳವಾರ ಚೆನ್ನೈ ಮೂಲದ ಡಾ. ಅಗರವಾಲ್ಸ್ ಅವರ ಐದು ಕಣ್ಣಿನ ಆಸ್ಪತ್ರೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಮಾನ್ಯರು ಉತ್ತಮ ದರ್ಜೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಬದ್ಧತೆ ತೋರಿಸುವುದು ಅಗತ್ಯವಾಗಿದೆ. ಇಂತಹ ಆಶಯಗಳಿಂದ ಸಮಾಜಕ್ಕೆ ಒಳಿತಾಗಲಿದೆ’ ಎಂದರು.
‘ಮನುಷ್ಯನ ಅತಿ ಮುಖ್ಯ ಇಂದ್ರೀಯವಾದ ಕಣ್ಣಿನ ಚಿಕಿತ್ಸೆ ನೀಡುತ್ತಿರುವ ಅಗರ್ವಾಲ್ಸ್ ಆಸ್ಪತ್ರೆಗೆ ಸರ್ಕಾರದ ವತಿಯಿಂದ ಅಗತ್ಯ ಬೆಂಬಲ ನೀಡಲಾಗುವುದು. ವಿಶ್ವದರ್ಜೆಯ ಚಿಕಿತ್ಸೆ ನೀಡುವ ಆಸ್ಪತ್ರೆಯ ಆಶಯ ಶ್ಲಾಘನೀಯ’ ಎಂದು ಹೇಳಿದರು.
ಆಸ್ಪತ್ರೆಯ ಮುಖ್ಯಸ್ಥ ಡಾ.ಅಮರ್ ಅಗರ್ವಾಲ್ ಮಾತನಾಡಿ ‘ಬನ್ನೇರುಘಟ್ಟ ರಸ್ತೆ, ಬಸವೇಶ್ವರ ನಗರ, ಕೋರಮಂಗಲ, ಬಸವನಗುಡಿ, ಪದ್ಮನಾಭನಗರಗಳಲ್ಲಿ ಏಕಕಾಲಕ್ಕೆ ಐದು ಆಸ್ಪತ್ರೆಗಳನ್ನು ಉದ್ಘಾಟನೆ ಮಾಡಲಾಗಿದೆ. ಕೋಲ್ಸ್ಪಾರ್ಕ್, ಯಲಹಂಕ ನ್ಯೂಟೌನ್, ಆರ್.ಟಿ.ನಗರ ಹಾಗೂ ಮಾರತ್ಹಳ್ಳಿಯಲ್ಲಿ ಮಾರ್ಚ್ ವೇಳೆಗೆ ನಾಲ್ಕು ಆಸ್ಪತ್ರೆಗಳು ಕಾರ್ಯಾರಂಭ ಮಾಡಲಿವೆ’ ಎಂದರು.
‘ದೇಶದಲ್ಲಿ ಕ್ಯಾಟರಾಕ್ಟ್ ಸಮಸ್ಯೆಯಿಂದಾಗಿ 1.8 ಕೋಟಿ ಜನ ಅಂಧರಾಗಿದ್ದು ಆಸ್ಪತ್ರೆ ಮಾನವ ಅಂಗಾಂಶ ಕಸಿಯಿಂದ ಕಣ್ಣಿಗೆ ಲೆನ್ಸ್ ಅಳವಡಿಸುತ್ತಿದೆ. ಮಧುಮೇಹದಿಂದ ಅಂಧರಾಗುವುದನ್ನು ತಪ್ಪಿಸಲು ನಗರದಲ್ಲಿ ಆಸ್ಪತ್ರೆ ಪ್ರತ್ಯೇಕ ಪ್ರತಿಷ್ಠಾನ ತೆರೆಯುವ ಉದ್ದೇಶ ಹೊಂದಿದೆ’ ಎಂದರು.
ಗೃಹ ಸಚಿವ ಆರ್.ಅಶೋಕ, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಇತರರಿದ್ದರು.