ಬೆಂಗಳೂರು: `ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಈ ಬಾರಿ ಐದು ಮಂದಿ ಗಣ್ಯರಿಗೆ 2011ನೇ ಸಾಲಿನ ವಿಶ್ವಕರ್ಮ ಪ್ರಶಸ್ತಿ ನೀಡಿ ಗೌರವಿಸಲಿದೆ~ ಎಂದು ಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಾಸ್ತುಶಿಲ್ಪಿ ಸ್ಥಪತಿ ಕೆ.ದಕ್ಷಿಣಾಮೂರ್ತಿ, ಶಿಲ್ಪಿ ಕಮಲಾಚಾರ್, ಭಾರತೀಯ ವಿದ್ಯಾಭವನದ ಮುಖ್ಯಸ್ಥ ಡಾ.ಮತ್ತೂರು ಕೃಷ್ಣಮೂರ್ತಿ, ಬಿಲ್ಲವ ಸಮಾಜದ ಮುಖಂಡ ಜೆ.ಸಿ.ಸುವರ್ಣ ಹಾಗೂ ಕವಯತ್ರಿ ಡಾ.ಲತಾ ರಾಜಶೇಖರ್ ಅವರಿಗೆ ಸೆ.17ರಂದು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತರಿಗೆ ತಲಾ 75 ಸಾವಿರ ರೂಪಾಯಿ ಮೌಲ್ಯದ ಚಿನ್ನದ ವಿಶ್ವಕರ್ಮನ ಮೂರ್ತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ವ್ಯವಹಾರದ ಗಿಮಿಕ್ ಅಲ್ಲ: ರಾಜ್ಯದ ವಿವಿಧ ಭಾಗಗಳಲ್ಲಿ ವಿಶ್ವಕರ್ಮ ಸಭಾದಿಂದ ಸಮಾವೇಶವನ್ನು ಸಂಘಟಿಸುತ್ತಿರುವುದು ನನ್ನ ಆಭರಣ ಮಳಿಗೆಗಳ ಪ್ರಚಾರಕ್ಕಾಗಿ ಅಲ್ಲ. ಯಾರಿಗೇ ಆಗಲಿ ಈ ಬಗ್ಗೆ ಸಂದೇಹ ಇದ್ದರೆ, ಅಂಥವರಿಗೆ ಸಮಾವೇಶ ಸಂಘಟನೆಯ ಹೊಣೆ ಹೊರಿಸಿ ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದರು.