ಬೆಂಗಳೂರು: ಕೆಎಸ್ಆರ್ಟಿಸಿ ಸಂಚಾರ ನಿರೀಕ್ಷಕರ ಹುದ್ದೆಯ ಆಯ್ಕೆ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘಿಸಿ ಅಭ್ಯರ್ಥಿಯೊಬ್ಬರಿಗೆ ಮೀಸಲಾತಿ ಕಲ್ಪಿಸಿದ್ದರಿಂದ ಅರ್ಹರೊಬ್ಬರಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿದೆ.
ನೇರ ನೇಮಕಾತಿ ಮೂಲಕ ಕೆಎಸ್ಆರ್ಟಿಸಿ ಸಂಚಾರ ನಿರೀಕ್ಷಕರ ಹುದ್ದೆಗೆ 2012 ಡಿಸೆಂಬರ್ 12ಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕಾರಹಳ್ಳಿ ಗ್ರಾಮದ ಕೆ.ಎನ್. ರಮೇಶ್ ಅವರು ‘3ಎ’ ವರ್ಗದಲ್ಲಿ ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಹತಾ ಪರೀಕ್ಷೆ ಮತ್ತು ದಾಖಲಾತಿಗಳ ಪರಿಶೀಲನೆ ಪ್ರಕ್ರಿಯೆ ನಂತರ ಸಂಭವನೀಯ ಮೆರಿಟ್ ಪಟ್ಟಿ ಪ್ರಕಟಿಸಲಾಯಿತು. ಈ ಪಟ್ಟಿಗೆ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ ಅಂತಿಮ ಸಂಭವನೀಯ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಯಿತು. ಈ ಎರಡು ಪಟ್ಟಿಗಳಲ್ಲಿಯೂ ‘3ಎ’ ವರ್ಗದ ಅಡಿಯಲ್ಲಿ ರಮೇಶ್ ಅವರ ಹೆಸರು ಪ್ರಕಟಿಸಲಾಗಿತ್ತು. ಆದರೆ. ಅಂತಿಮ ಆಯ್ಕೆ ಪಟ್ಟಿಯಲ್ಲಿ ರಮೇಶ್ ಹೆಸರು ನಾಪತ್ತೆಯಾಗಿತ್ತು.
ಇವರ ಬದಲಾಗಿ ಸಾಮಾನ್ಯ ವರ್ಗ ಹಾಗೂ ಗ್ರಾಮೀಣ ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ವಿಜಾಪುರ ಜಿಲ್ಲೆಯ ಮಡಿವಾಳಪ್ಪಗೌಡ ದೊಡ್ಡಮನಿ ಎನ್ನುವ ಅಭ್ಯರ್ಥಿ ಹೆಸರು ‘3ಎ’ ವರ್ಗದ ಅಡಿಯಲ್ಲಿ ಸೇರಿಸಲಾಗಿತ್ತು.
‘ನಾನು 3ಎ ಗ್ರಾಮೀಣ ಅಭ್ಯರ್ಥಿಯ ಮೀಸಲಾತಿ ಅಡಿ ಅರ್ಹ ಅಭ್ಯರ್ಥಿ. ಆದರೆ, ಮಡಿವಾಳಪ್ಪಗೌಡ ದೊಡ್ಡಮನಿ ಎನ್ನುವವರನ್ನು 3ಎ ಮತ್ತು ಗ್ರಾಮೀಣ ಮೀಸಲಾತಿ ಅಡಿ ಆಯ್ಕೆ ಮಾಡಿರುವುದು ಕಾನೂನುಬಾಹಿರ. ನಾನು 3ಎ ಮತ್ತು ಗ್ರಾಮೀಣ ಮೀಸಲಾತಿ ಅಡಿ ಶೇಕಡಾ 64.05 ಅಂಕಗಳನ್ನು ಪಡೆದಿದ್ದೇನೆ. ಆದ್ದರಿಂದ ಅಂತಿಮ ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಬೇಕು’ ಎಂದು ರಮೇಶ್ ಒತ್ತಾಯಿಸಿದ್ದಾರೆ.