ನೆಲಮಂಗಲ: `ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು, ಅಭಿವೃದ್ಧಿ ಪರ ಚಿಂತನೆಗಳನ್ನು ಹೊಂದಿರುವ ಯುವಕರಿಂದ ಗ್ರಾಮಗಳು ಅಭಿವೃದ್ಧಿಯಾಗುತ್ತವೆ ಎಂಬುದಕ್ಕೆ ಗೋಪಾಲಪುರ ಪಂಚಾಯತಿ ಮಾದರಿಯಾಗಿದೆ~ ಎಂದು ಶಾಸಕ ಎಸ್. ಆರ್.ವಿಶ್ವನಾಥ್ ತಿಳಿಸಿದರು.
ಇಲ್ಲಿಗೆ ಸಮೀಪದ ಗೋಪಾಲಪುರದಲ್ಲಿ ರೂ. 51 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಮ ಪಂಚಾಯಿತಿಯ (ಗ್ರಾಪಂ) ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಂಚೆ ಕಚೇರಿ ಉದ್ಘಾಟಿಸಿ ಮಾತನಾಡಿದ ನಗರ ಜಿಲ್ಲಾ ಪಂಚಾಯಿತಿ (ಜಿಪಂ) ಅಧ್ಯಕ್ಷ ಸಿ.ಮರಿಯಪ್ಪ, `ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ರಾಮಸ್ವಾಮಿ ತಮ್ಮ ತಂದೆ ತಾಯಿ ಹೆಸರಿನಲ್ಲಿ ರೂ. 25 ಲಕ್ಷ ಪಂಚಾಯಿತಿ ಕಟ್ಟಡಕ್ಕೆ ನೀಡಿರುವುದು ಶ್ಲಾಘನೀಯ ಮತ್ತು ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ~ ಎಂದರು.
ಜಿಪಂ ಉಪಾಧ್ಯಕ್ಷೆ ಸರ್ವಮಂಗಳಾ ಫಲಾನುಭವಿಗಳಿಗೆ ಆರ್ಥಿಕ ಸೌಲಭ್ಯಗಳನ್ನು ವಿತರಿಸಿದರು. ತಾಲ್ಲೂಕು ಪಂಚಾಯಿತಿ (ತಾಪಂ) ಅಧ್ಯಕ್ಷ ಚಾಂದ್ಪಾಷಾ ಪಂಚಾಯಿತಿ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ವಿತರಿಸಿದರು. ತಾ.ಪಂ. ಉಪಾಧ್ಯಕ್ಷೆ ಲಕ್ಷ್ಮೀ ರಮೇಶ್ ವೃತ್ತಿಪರ ಫಲಾನುಭವಿಗಳಿಗೆ ಸಲಕರಣೆಗಳನ್ನು ವಿತರಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ಸೌಭಾಗ್ಯ ಆಯ್ದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು.
ಗೋಪಾಲಪುರ ಗ್ರಾ.ಪಂ. ಅಧ್ಯಕ್ಷ ವಿ.ರಾಮಸ್ವಾಮಿ ಅವರು ಅಧ್ಯಕ್ಷತೆ ವಹಿಸಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಾದ ಜಿ.ಪಂ. ಸದಸ್ಯ ಜಯರಾಮಯ್ಯ, ತಾ.ಪಂ.ಸದಸ್ಯೆ ವೀಣಾ ರಮೇಶ್, ಗ್ರಾ.ಪಂ.ಸದಸ್ಯರಾದ ಸೌಭಾಗ್ಯ, ಅಪ್ಪಣ್ಣಯ್ಯ, ನಾಗರಾಜು, ಪಾರ್ವತಮ್ಮ, ಮಂಜುಳಾ, ಮುನಿರಾಜು, ರಾಜು, ಲಕ್ಷ್ಮಣ, ಲಕ್ಷ್ಮೀದೇವಮ್ಮ, ಸಿದ್ದಬಸಮ್ಮ ಅವರನ್ನು ಸನ್ಮಾನಿಸಿದರು.
ಎಂಜಿನಿಯರ್ ನಾರಾಯಣಸ್ವಾಮಿ, ಎಚ್.ಎನ್.ಉಮೇಶ್ ವೇದಿಕೆಯಲ್ಲಿದ್ದರು. ರೋಟರಿ ಕ್ಲಬ್ ಕಾರ್ಯದರ್ಶಿ ಎಸ್.ಮುನಿರಾಜಯ್ಯ ಸ್ವಾಗತಿಸಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಚ್.ಬಿ.ಸಿದ್ದರಾಜು ನಿರೂಪಿಸಿ, ಗ್ರಾ.ಪಂ.ಕಾರ್ಯದರ್ಶಿ ಎಂ.ಆರ್. ಸಿದ್ದಪ್ಪ ವಂದಿಸಿದರು. ಇದೇ ಸಂದರ್ಭದಲ್ಲಿ ಭಾರತ್ ನಿರ್ಮಾಣ್ ರಾಜೀವ್ಗಾಂಧಿ ಸೇವಾ ಕೇಂದ್ರ, ಉಗ್ರಾಣಗಳನ್ನು ಉದ್ಘಾಟಿಸಲಾಯಿತು.