ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಮ್ಮ ನಿರೀಕ್ಷಣಾ ಜಾಮೀನಿನ ಷರತ್ತು ಸಡಿಲಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
‘ಈ ಮೊದಲು ನಿಮಗೆ ನಿರೀಕ್ಷಣಾ ಜಾಮೀನು ನೀಡಿರುವ ನ್ಯಾಯಮೂರ್ತಿ ರತ್ನಕಲಾ ಅವರಿ ನ್ಯಾಯಪೀಠದ ಮುಂದೆಯೇ ಈ ಅರ್ಜಿಯನ್ನೂ ಸಲ್ಲಿಸಿ’ ಎಂದು ಬೂದಿಹಾಳ್ ಸೂಚಿಸಿದರು.
‘ನಾನು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ. ಆದ್ದರಿಂದ 15 ದಿನಗಳಿಗೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ವಿಧಿಸಲಾಗಿರುವ ಷರತ್ತು ಸಡಿಸಲಬೇಕು’ ಎಂದು ಕೋರಿ ಕುಮಾರಸ್ವಾಮಿ ಈ ಅರ್ಜಿ ಸಲ್ಲಿಸಿದ್ದಾರೆ.
ಜಂತಕಲ್ ಮೈನಿಂಗ್ ಕಂಪೆನಿಗೆ ಗಣಿ ಪರವಾನಗಿ ನೀಡುವಂತೆ ಐಎಎಸ್ ಅಧಿಕಾರಿ ಮೇಲೆ ಒತ್ತಡ ಹೇರಿದ ಆರೋಪವನ್ನು ಕುಮಾರಸ್ವಾಮಿ
ಎದುರಿಸುತ್ತಿದ್ದಾರೆ.