ಬೆಂಗಳೂರು: ದಾವಣಗೆರೆಯ ಬಸವಕೇಂದ್ರ, ಶಿವಯೋಗಾಶ್ರಮದ ಆಶ್ರಯದಲ್ಲಿ ಜಯದೇವ ಮುರುಘರಾಜೇಂದ್ರ ಮಹಾಸ್ವಾಮೀಜಿ ಅವರ 56ನೇ ಸ್ಮರಣೋತ್ಸವದ ಅಂಗವಾಗಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಗೆ `ಜಯದೇವಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ಬನಶಂಕರಿಯಲ್ಲಿರುವ ಜಿ.ಎಸ್.ಎಸ್ ಸ್ವಗೃಹದಲ್ಲಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಹಿರಿಯ ಕವಿಗೆ ಪ್ರಶಸ್ತಿ ಪ್ರದಾನ ಮಾಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, `ಜಿ.ಎಸ್.ಎಸ್. ಅವರ ಸಾಹಿತ್ಯ ಸೇವೆ ವಿಸ್ಮಯ ಮೂಡಿಸುವಂತಹುದು. ಅವರ ಬರಹ ಕನ್ನಡಕ್ಕೆ ದೊಡ್ಡ ಕಾಣಿಕೆ. ಈಗಲೂ ಅವರ ಜೀವನೋತ್ಸಾಹ ಕುಂದಿಲ್ಲ. ಅವರ ನೆನಪಿನ ಶಕ್ತಿ ಅಗಾಧ' ಎಂದು ಬಣ್ಣಿಸಿದರು.
`ಕಾವ್ಯ, ವಿಮರ್ಶೆ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಅವರು ಅಪಾರ ಸಾಧನೆ ಮಾಡಿದ್ದಾರೆ. ಇಂದಿನ ಸಾಹಿತಿಗಳಿಗೆ ಹಾಗೂ ಯುವ ಬರಹಗಾರರಿಗೆ ಜಿ.ಎಸ್.ಎಸ್. ಸ್ಫೂರ್ತಿ' ಎಂದರು.
ಜಿ.ಎಸ್.ಶಿವರುದ್ರಪ್ಪ ಮಾತನಾಡಿ, ಜಯದೇವಶ್ರೀ ಪ್ರಶಸ್ತಿ ಸ್ವೀಕಾರ ಮಾಡುತ್ತಿರುವುದು ಸಂತಸ ತಂದಿದೆ. ಜನರ ಸಹಕಾರ ಹಾಗೂ ಸಾಹಿತ್ಯ ಅಭಿಮಾನಿಗಳ ಪ್ರೀತಿಯಿಂದ ಹೃದಯ ತುಂಬಿ ಬಂದಿದೆ ಎಂದರು.
ವಸತಿ ಸಚಿವ ವಿ.ಸೋಮಣ್ಣ, ಹಿರಿಯ ವಿಮರ್ಶಕ ಡಾ.ಮರುಳಸಿದ್ದಪ್ಪ, ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, ಜಿ.ಎಸ್.ಎಸ್. ಅವರ ಪತ್ನಿ ರುದ್ರಾಣಿ, ಲೇಖಕ ಬೈರಮಂಗಲ ರಾಮೇಗೌಡ ಇದ್ದರು.