ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ತ್ಯಾಜ್ಯದಿಂದ ನಗರದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಹಾಗೂ ಪಟಾಕಿ ಸಿಡಿಸುವುದರಿಂದ ಉಂಟಾಗುವ ಆಕಸ್ಮಿಕ ಘಟನೆಗಳನ್ನು ತಡೆಯಲು ಬಿಬಿಎಂಪಿಯು ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದು ಆಯುಕ್ತ ಸಿದ್ದಯ್ಯ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾರ್ವಜನಿಕರು ದೀಪಾವಳಿ ಹಬ್ಬವನ್ನು ಆಚರಿಸುವಾಗ ಪರಿಸರ ಮಲಿನಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ಕಡಿಮೆ ಹಾನಿಕಾರಕ ಪಟಾಕಿಗಳನ್ನು ಸಿಡಿಸಿ, ಪರಿಸರ ರಕ್ಷಣೆಗಾಗಿ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಪಟಾಕಿ ತ್ಯಾಜ್ಯಗಳನ್ನು ರಸ್ತೆ ಬದಿ ಮೋರಿಗಳಿಗೆ ಹಾಕುವ ಬದಲು ಒಂದೆಡೆ ಗುಡ್ಡೆ ಹಾಕಿ, ಪಾಲಿಕೆಯ ತಳ್ಳುವ ಗಾಡಿಗಳಿಗೆ ನೀಡಬೇಕು. ಸಾರ್ವಜನಿಕರು ಪಟಾಕಿಗಳನ್ನು ಹಾರಿಸುವಾಗ ಆಕಸ್ಮಿಕ ಅವಘಡಕ್ಕೆ ಒಳಗಾದವರಿಗೆ ತುರ್ತು ಚಿಕಿತ್ಸೆ ನೀಡಲು ಪಾಲಿಕೆಯ ಎಲ್ಲಾ ಆಸ್ಪತ್ರೆಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಯಾವುದೇ ದೂರುಗಳಿದ್ದಲ್ಲಿ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: 22660000 / 22221188, 22975595 ಸಂಪರ್ಕಿಸಬೇಕು ಎಂದು ಸೂಚನೆ ನೀಡಿದ್ದಾರೆ.