ಬೆಂಗಳೂರು: ಬಿಎಂಟಿಸಿಯ ಜಯನಗರ, ಶಾಂತಿನಗರ, ವೈಟ್ಫೀಲ್ಡ್, ಕೆಂಗೇರಿ, ದೊಮ್ಮಲೂರು ಸೇರಿದಂತೆ ಇತರೆ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ದಂಧೆ ನಡೆಯುತ್ತಿದ್ದು, ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವಾಯ್ಸ್ ಆಫ್ ಪಬ್ಲಿಕ್ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಹೈಕೋರ್ಟ್ ವಕೀಲ ಎನ್.ಪಿ.ಅಮೃತೇಶ್ ಮಾತನಾಡಿ, 'ಪಾರ್ಕಿಂಗ್ ಸ್ಥಳಗಳಲ್ಲಿ ಬೈಕ್, ಕಾರು ಸೇರಿದಂತೆ ಇತರೆ ವಾಹನಗಳಿಗೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ. ಟೆಂಡರ್ನಲ್ಲಿ ಉಲ್ಲೇಖಿಸಿರುವ ಬೆಲೆಯಂತೆ ಹಣ ಪಡೆಯುತ್ತಿಲ್ಲ. ಬಿಎಂಟಿಸಿ ಆಡಳಿತ ಮಂಡಳಿ ಮತ್ತು ಟೆಂಡರ್ದಾರರು ಶಾಮೀಲಾಗಿ ಪಾರ್ಕಿಂಗ್ ಶುಲ್ಕವನ್ನು ದುಪ್ಪಟ್ಟು ಮಾಡಿ, ಸಾರ್ವಜನಿಕರಿಂದ ಹಗಲುದರೋಡೆ ಮಾಡಲು ಹೊರಟಿದ್ದಾರೆ'ಎಂದು ದೂರಿದರು.
'ಹೆಚ್ಚಿನ ಹಣ ನೀಡಲು ನಿರಾಕರಿಸಿದರೆ, ರೌಡಿಗಳಿಂದ ಹಲ್ಲೆ ನಡೆಸಲು ಮುಂದಾಗುತ್ತಿದ್ದಾರೆ. ಈ ದಂಧೆಯಲ್ಲಿ ಹಲವು ಗಣ್ಯರು ಭಾಗಿಯಾಗಿದ್ದು, ನೂತನ ಸಮ್ಮಿಶ್ರ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಕಡಿವಾಣ ಹಾಕಬೇಕಿದೆ. ಪಾರ್ಕಿಂಗ್ ಟೆಂಡರ್ ಪಡೆದವರಿಗೆ ಕಡ್ಡಾಯವಾಗಿ ಶುಲ್ಕದ ರಶೀದಿ ನೀಡಬೇಕು ಮತ್ತು ರಶೀದಿಯಲ್ಲಿ ದೂರು ಸಲ್ಲಿಸಲು ದೂರವಾಣಿ ಸಂಖ್ಯೆ ನಮೂದಿಸಬೇಕು' ಎಂದರು. ವಕೀಲ ನಟರಾಜು ಎಸ್.ಶರ್ಮಾ ಇದ್ದರು.