ಬೆಂಗಳೂರು: ಪಶ್ಚಿಮ ಕಾರ್ಡ್ ರಸ್ತೆಯ ಇಸ್ಕಾನ್ ದೇವಾಲಯದ ಬಳಿ ಬೈಕ್ಗೆ ಬಸ್ ಗುದ್ದಿದ್ದರಿಂದ ಬಿ.ಕಾಂ ವಿದ್ಯಾರ್ಥಿನಿ ಚೈತ್ರಾ (21) ಎಂಬುವರು ಮೃತಪಟ್ಟಿದ್ದಾರೆ.
ದಿಂಡ್ಲು ನಿವಾಸಿಯಾಗಿದ್ದ ಚೈತ್ರಾ, ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದರು. ಮಂಗಳವಾರ ಸಂಜೆ ತಂದೆಯ ಜತೆ ಬೈಕ್ನಲ್ಲಿ ಹೊರಟಿದ್ದಾಗ ಈ ದುರ್ಘಟನೆ ಸಂಭವಿಸಿದೆ. ತಂದೆಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪರಿಚಯಸ್ಥರೊಬ್ಬರ ಮದುವೆಯ ಆರತಕ್ಷತೆಯಲ್ಲಿ ಪಾಲ್ಗೊಳ್ಳಲೆಂದು ಚೈತ್ರಾ ಹಾಗೂ ಅವರ ತಂದೆ ಹೊರಟಿದ್ದರು. ದೇವಾಲಯದ ಬಳಿ ಹಿಂದಿನಿಂದ ಬಂದ ಬಸ್, ಬೈಕ್ಗೆ ಗುದ್ದಿತ್ತು. ಬೈಕ್ನಿಂದ ಬಿದ್ದು ತೀವ್ರ ಗಾಯಗೊಂಡಿದ್ದರಿಂದ ಚೈತ್ರಾ ಮೃತಪಟ್ಟರು ಎಂದು ಮಲ್ಲೇಶ್ವರ ಸಂಚಾರ ಪೊಲೀಸರು ತಿಳಿಸಿದರು.
‘ಶವವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ. ಆತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ. ಘಟನೆ ಬಳಿಕ ಬಸ್ ನಿಲ್ಲಿಸದೆ ಆತ ಪರಾರಿಯಾಗಿದ್ದಾನೆ. ಬಸ್ ಯಾವುದು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದರು.