ಬೆಂಗಳೂರು: ಚಿಕ್ಕಬಾಣಾವರದ ಆರ್.ಆರ್. ಇನ್ಸ್ಟಿಟ್ಯೂಟ್ ಹಾಗೂ ಲಯನ್ಸ್ ಸಂಸ್ಥೆಯ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ 2,200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಅವರಿಗೆ ಮಧುಮೇಹದ ಕುರಿತು ಅರಿವು ಮೂಡಿಸಲಾಯಿತು.
‘ಮಧುಮೇಹ ಎಂದರೆ ಅದು ಕಾಯಿಲೆ ಅಲ್ಲ ಜೀವನ ಕ್ರಮ. ಈ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಇಲ್ಲವಾದರೆ, ಮೂತ್ರಪಿಂಡ, ನರ, ಹೃದಯದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಲಯನ್ಸ್ ಸಂಸ್ಥೆಯ ಜಿಲ್ಲಾ ಗವರ್ನರ್ ಜಿ.ಪಿ.ದಿವಾಕರ್ ಹೇಳಿದರು.
ಆರ್.ಆರ್.ಇನ್ಸ್ಟಿಟ್ಯೂಟ್ನ ಅಧ್ಯಕ್ಷ ವಿ.ರಾಜಾರೆಡ್ಡಿ, ‘ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲೂ ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದರ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸಬೇಕಿದೆ’ ಎಂದರು.