ಬೆಂಗಳೂರು: ರಾಜಧಾನಿಯಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೂ ಮನರಂಜನಾ ಚಟುವಟಿಕೆ ನಡೆಸಲು ಮತ್ತು ಹೋಟೆಲುಗಳನ್ನು ತೆರೆಯಲು ಅವಕಾಶ ನೀಡಬೇಕು ಎಂದು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಯವರ ಗೃಹ ಕಚೇರಿಯಲ್ಲಿ ಬುಧವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮಜುಂದಾರ್ ಷಾ ಅವರು, ಬೆಂಗಳೂರಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.
ನಗರದಲ್ಲಿ ಔದ್ಯಮಿಕ ಚಟುವಟಿಕೆಗಳು ಹೆಚ್ಚುತ್ತಿರುವುದರಿಂದ ರಾತ್ರಿ 1 ಗಂಟೆಯವರೆಗೂ ಮನರಂಜನಾ ಚಟುವಟಿಕೆ ನಡೆಸಲು ಮತ್ತು ಹೋಟೆಲುಗಳನ್ನು ತೆರೆದಿರಲು ಅವಕಾಶ ನೀಡಿ ಎಂದು ಆದೇಶ ಹೊರಡಿಸಬೇಕು ಎಂಬ ಮನವಿಯನ್ನು ಈ ಸಂದರ್ಭದಲ್ಲಿ ಮುಂದಿಟ್ಟರು.
ಮೆಟ್ರೊ ರೈಲು ಯೋಜನೆ ವಿಸ್ತರಣೆ, ಕಬ್ಬನ್ ಉದ್ಯಾನ ರಕ್ಷಣೆ ಮತ್ತು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ, ನಗರದ ರಸ್ತೆಗಳ ನಿರ್ವಹಣೆಗೆ ಅನುದಾನ ಬಿಡುಗಡೆ ಮತ್ತಿತರ ವಿಷಯಗಳ ಕುರಿತು ಮುಖ್ಯಮಂತ್ರಿಯವರ ಜತೆ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.