ಬೆಂಗಳೂರು: ‘ಕನ್ನಡಿಗರ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಸರೋಜಿನಿ ಮಹಿಷಿ ಅವರು ನೀಡಿರುವವರದಿಯ ಮೂಲ ಆಶಯಕ್ಕೆ ರಾಜ್ಯ ಸರ್ಕಾರ ಧಕ್ಕೆ ತಂದಿದೆ’ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರರು ನಗರದ ಪುರಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಕರ್ನಾಟಕ ವಿಕಾಸ ರಂಗ’ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಂಶೋಧಕ ಎಂ. ಚಿದಾನಂದ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಬಿ.ಟಿ.ಲಲಿತಾ ನಾಯಕ್ ಮೊದಲಾದವರು ಪಾಲ್ಗೊಂಡಿದ್ದರು.
‘ವರದಿಯನ್ನೇ ಬುಡಮೇಲು ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದು ಖಂಡನೀಯ. ಅಧಿಸೂಚನೆಯನ್ನು ಕೂಡಲೇ ಹಿಂಪಡೆದು ಮೂಲ ಆಶಯಕ್ಕೆ ತಕ್ಕಂತೆ ಹೊಸದಾಗಿ ಅಧಿಸೂಚನೆ ಹೊರಡಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
‘ಕನ್ನಡಿಗರು ಎಂದು ಗುರುತಿಸಲು ಕನಿಷ್ಠ 10ನೇ ತರಗತಿಯವರೆಗೆ ಕನ್ನಡವನ್ನು ವಿಷಯವಾಗಿ ಅಭ್ಯಾಸ ಮಾಡಿರಬೇಕು. ಕರ್ನಾಟಕದಲ್ಲಿ 15 ವರ್ಷ ಕಡ್ಡಾಯವಾಗಿ ನೆಲೆಸಿರಬೇಕು ಎಂಬ ಅಂಶ ವರದಿಯಲ್ಲಿದೆ. ಇದನ್ನು ಬದಲಾಯಿಸಿ ಬೇಡವಾದ ಅಂಶಗಳನ್ನು ಅಧಿಸೂಚನೆಯಲ್ಲಿ ಸೇರಿಸಲಾಗಿದೆ’ ಎಂದರು.