ನೆಲಮಂಗಲ: ವಿಜ್ಞಾನದ ವಿಸ್ಮಯ ಹಾಗೂ ಪ್ರಯೋಗಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಯಂಟಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ವಿಜ್ಞಾನ ಪ್ರದರ್ಶನ ಏರ್ಪಡಿಸಲಾಗಿತ್ತು.
ಮುಖ್ಯ ಶಿಕ್ಷಕ ಡಿ. ಶ್ರೀನಿವಾಸಯ್ಯ, ಪ್ರದರ್ಶನ ಉದ್ಘಾಟಿಸಿದರು. ವಿದ್ಯುನ್ಮಾನ, ಸೌರಶಕ್ತಿಯ ಮಾದರಿಗಳು, ವಿದ್ಯುತ್ ಚಾಲಿತ ಉಪಕರಣಗಳು, ಆಹಾರದಲ್ಲಿನ ಪೋಷಕಾಂಶಗಳ ಪತ್ತೆ ಹಚ್ಚುವ ಉಪಕರಣಗಳು, ನೀರಾವರಿ ಪದ್ದತಿ, ಮಳೆ ನೀರು ಸಂಗ್ರಹ ವಿಧಾನಗಳ ಮಾದರಿಗಳನ್ನು ಪ್ರದರ್ಶಿಸಲಾಗಿತ್ತು. ಸುತ್ತಮುತ್ತಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪೋಷಕರು ಪ್ರದರ್ಶನ ವೀಕ್ಷಿಸಿದರು. ಈ ಪ್ರದರ್ಶನಕ್ಕೆ ಹಿರಿಯ ಶಿಕ್ಷಕ ಎಸ್.ಮಂಜಪ್ಪ, ಜಿ.ಸುಮಂಗಳಾ ಮತ್ತು ಅರುಣ್ಕುಮಾರ್ ಮಾರ್ಗದರ್ಶನ ನೀಡಿದ್ದರು.
ಅನುದಾನದ ಭರವಸೆ: ವಿಜ್ಞಾನ ಅಧ್ಯಯನದಿಂದ ವಂಚಿತರಾಗುತ್ತಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಿ ರೂ. 20ಲಕ್ಷ ಅನುದಾನ ನೀಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೆಂಕಟಸ್ವಾಮಿ ತಿಳಿಸಿದರು.
ತಾಲ್ಲೂಕಿನ ಯಂಟಗಾನಹಳ್ಳಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಮಂದಿರ ಉದ್ಘಾಟಿಸಿ ಮಾತನಾಡಿದ ಅವರು, ಮಾತೃ ಭಾಷೆಯಲ್ಲಿಯೇ ವಿಜ್ಞಾನ ಬೋಧನೆ ಮಾಡಲು ಸಕಲ ಸಿದ್ದತೆಗಳು ನಡೆಯುತ್ತಿವೆ ಎಂದರು.
ವಿಜ್ಞಾನ ಉಪಕರಣಗಳ ಖರೀದಿಗೆ ರೂ. 25 ಸಾವಿರ ನೆರವು ನೀಡಿದ ಕ.ರ.ವೇ. ನಿರ್ದೇಶಕ ಆರ್.ವೆಂಕಟನಾಥನ್. ಶಕ್ತರು ಅಶಕ್ತರಿಗೆ ಸಹಾಯ ಹಸ್ತ ನೀಡುವುದು ಮಾನವೀಯತೆಯ ಧರ್ಮ ಎಂದರು.
ಪ್ರಿಯದರ್ಶಿನಿ ಕಾಲೇಜಿನ ಪ್ರಾಂಶುಪಾಲ ಎ.ಎಸ್.ರಮಾನಂದ್, ಹಿರಿಯ ಉಪನ್ಯಾಸಕ ಎಂ.ಜಿ.ಗೋವಿಂದಯ್ಯ ವೇದಿಕೆಯಲ್ಲಿದ್ದರು. ಎನ್.ಎಸ್.ಎಸ್. ಅಧಿಕಾರಿ ಬಿ.ಮಧುಸೂದನ್ ಸ್ವಾಗತಿಸಿ, ಉದ್ಯೋಗಾಧಿಕಾರಿ ಎಚ್.ಲೋಕೇಶ್ ವಂದಿಸಿದರು. ಹಸಿರು ಪಡೆಯ ಅಧಿಕಾರಿ ಜಿ.ಬಿ.ವೆಂಕಟೇಶ್ ನಿರೂಪಿಸಿದರು.