ಬೆಂಗಳೂರು: `ಯಾವುದೇ ವ್ಯಕ್ತಿ ಬುದ್ಧಿಮತ್ತೆಯಿಂದ ಶೇ 20ರಷ್ಟು ಯಶಸ್ಸು ಸಾಧಿಸಬಹುದು. ಆದರೆ ಭಾವನಾತ್ಮಕ ಬುದ್ಧಿಶಕ್ತಿಯನ್ನು ಅಭಿವೃದ್ಧಿಪಡಿಸುವ ಮೂಲಕ ಶೇ 80ರಷ್ಟು ಯಶಸ್ಸು ಗಳಿಸಬಹುದು~ ಎಂದು ಬಂಜಾರಾ ಅಕಾಡೆಮಿಯ ಸಂಸ್ಥಾಪಕ ಹಾಗೂ ಶಿಕ್ಷಣ ತಜ್ಞ ಡಾ. ಅಲಿ ಖ್ವಾಜಾ ಅಭಿಪ್ರಾಯಪಟ್ಟರು.
`ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಸಮೂಹವು ರಾಜ್ಯ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಗರದ ಶಿಕ್ಷಕರ ಸದನದಲ್ಲಿ ಐಐಟಿ ಪ್ರವೇಶ ಪರೀಕ್ಷೆಯ ಬಗ್ಗೆ ಪೋಷಕರು ಹಾಗೂ ಶಿಕ್ಷಕರಿಗೆ ಭಾನುವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
`ಜೀವನದ ಯಾವುದೇ ಹಂತದಲ್ಲೂ ಭಾವನಾತ್ಮಕ ಜಾಣತನವನ್ನು ಅಭಿವೃದ್ಧಿಪಡಿಸಲು ಸಾಧ್ಯವಿದೆ. ಭಾವನಾತ್ಮಕ ಜಾಣತನದ ಅಧಿಕ ಬಳಕೆಯಿಂದ ಜೀವನದಲ್ಲಿ ಶಾಂತಿ, ಸ್ವಾತಂತ್ರ್ಯ, ಸಂತೋಷ, ಸ್ವಯಂನಿಯಂತ್ರಣ ಸಾಧ್ಯ~ ಎಂದು ಅವರು ಪ್ರತಿಪಾದಿಸಿದರು.
`ಪೋಷಕರು ಮಕ್ಕಳ ಮೇಲೆ ನಿಯಂತ್ರಣ ಹೇರಬಾರದು. ಅವರಿಗೆ ಸ್ಫೂರ್ತಿ ತುಂಬಿದರೆ ಅದ್ಭುತ ಸಾಧನೆಗಳನ್ನು ಮಾಡುತ್ತಾರೆ. ಶಾಲಾ ಬದಲಾವಣೆ ಸೇರಿದಂತೆ ಶೈಕ್ಷಣಿಕ ವಿಚಾರಗಳಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪೋಷಕರು ನಿರ್ಧಾರ ತೆಗೆದುಕೊಳ್ಳಬೇಕು~ ಎಂದು ಅವರು ಕಿವಿಮಾತು ಹೇಳಿದರು.
`ನಮ್ಮಲ್ಲಿ ಸ್ವಯಂಜಾಗೃತಿ ಮುಖ್ಯ. ಒಂದು ಹಂತ ದಾಟಿದ ಬಳಿಕ ವ್ಯಕ್ತಿಗಳು ತಮ್ಮ ಬಗ್ಗೆ ಕಾಳಜಿ ವಹಿಸುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಈ ಪ್ರವೃತ್ತಿ ಸಲ್ಲದು. ಅಲ್ಲದೆ ಸ್ವಯಂನಿರ್ವಹಣೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ತಂತ್ರಜ್ಞಾನದ ಅಭಿವೃದ್ಧಿಯ ಪರಿಣಾಮದಿಂದ ಮಾನವ ಶ್ರಮದ ಒತ್ತಡ ಕಡಿಮೆಯಾಗಿದೆ. ಆದರೆ, ನಮ್ಮಲ್ಲಿ ಇತರರೊಂದಿಗೆ ಬೆರೆಯುವ ಕೌಶಲದ ಕೊರತೆ ಉಂಟಾಗಿದೆ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.
`ಸೂಪರ್ 30~ ಖ್ಯಾತಿಯ ಗಣಿತಶಾಸ್ತ್ರಜ್ಞ ಆನಂದ್ ಕುಮಾರ್ ಮಾತನಾಡಿ, `ಜಾಗತೀಕರಣದಿಂದ ವಿದ್ಯಾರ್ಥಿ ಸಮುದಾಯಕ್ಕೆ ಅಧಿಕ ಸವಾಲು ಎದುರಾಗಿದೆ. ಈ ಸವಾಲುಗಳನ್ನು ಎದುರಿಸಲು ಅವರನ್ನು ನಾವು ಸಜ್ಜುಗೊಳಿಸಬೇಕಿದೆ~ ಎಂದರು.