ಬೆಂಗಳೂರು: ‘ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರು ಮುಸ್ಲಿಂ ಮುಖಂಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ನಮ್ಮ ಸಮುದಾಯಕ್ಕೆ ನೋವುಂಟು ಮಾಡಿದೆ. ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು’ ಎಂದು ಮುಸ್ಲಿಮ್ಸ್ ಯುನಿಟಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಖಾಸಿಂ ಸಾಬ್ ಒತ್ತಾಯಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ನ ಎಲ್ಲ ಮುಸ್ಲಿಂ ಮುಖಂಡರು ಜೆಡಿಎಸ್ ಪಕ್ಷದಿಂದಲೇ ಬೆಳೆದವರು ಎಂದು ರೇವಣ್ಣ ಹೇಳಿಕೆ ನೀಡಿದ್ದಾರೆ. ಸ್ವಂತ ಶ್ರಮದಿಂದ ರಾಜಕೀಯ ಶಕ್ತಿಯಾಗಿ ಬೆಳೆದ ಸಮುದಾಯದ ಮುಖಂಡರಿಗೆ ಇದರಿಂದ ನೋವಾಗಿದೆ’ ಎಂದರು.
‘ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ಇತ್ತೀಚೆಗೆ ನಡೆದ ಜುಬೈರ್ ಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಸಚಿವ ಯು.ಟಿ. ಖಾದರ್ ಅವರ ರಾಜೀನಾಮೆ ಕೇಳಿರುವುದು ರಾಜಕೀಯ ಪ್ರೇರಿತ’ ಎಂದರು.
‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಮನೆ ಮೇಲಿನ ದಾಳಿ ಸಂವಿಧಾನ ವಿರೋಧಿ ಕೃತ್ಯ. ಮುಸ್ಲಿಂ ನಾಯಕರ ಮೇಲಿನ ದಬ್ಬಾಳಿಕೆಗಳು ಇದೇ ರೀತಿ ಮುಂದುವರಿದರೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.