ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ (ನರೇಗಾ)ವು ಸಮರ್ಪಕವಾಗಿ ಆಗುತ್ತಿಲ್ಲ. ಕೂಲಿಕಾರರನ್ನು ವಂಚಿಸಲಾಗುತ್ತಿದೆ ಎಂಬ ದೂರುಗಳು ರಾಜ್ಯಮಟ್ಟದ ಸಮಾವೇಶದಲ್ಲಿ ಕೇಳಿಬಂದವು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ (ನರೇಗಾ)’ ಕುರಿತು ಕಾಯಕ ಗುಂಪುಗಳ ಮತ್ತು ಕಾಯಕ ಬಂಧುಗಳ ರಾಜ್ಯಮಟ್ಟದ ಸಮಾವೇಶದಲ್ಲಿ ರಾಜ್ಯದೆಲ್ಲೆಡೆಯಿಂದ ಬಂದಿದ್ದ ಕೂಲಿಕಾರರು ಸಮಸ್ಯೆಗಳನ್ನು ಹೇಳಿಕೊಂಡರು.
‘ಕೂಲಿ ಕೆಲಸ ಮಾಡಿದರೂ ಸರಿಯಾಗಿ ನಮಗೆ ಕೂಲಿಯ ಹಣವನ್ನೇ ನೀಡುವುದಿಲ್ಲ. ನಮಗೆ ಕೇವಲ 60 ದಿನಗಳು ಮಾತ್ರ ಕೆಲಸವನ್ನು ನೀಡುತ್ತಾರೆ. ರೂ 100 ಮಾತ್ರ ಕೂಲಿ ನೀಡಿ ನಮ್ಮನ್ನು ವಂಚಿಸಲಾಗುತ್ತಿದೆ’ ಎಂದು ಜೇವರ್ಗಿಯಿಂದ ಬಂದಿದ್ದ ಕೂಲಿಕಾರ ಪೀರಪ್ಪ ಅವರು ದೂರಿದರು.
‘ನಾವು ಮಾಡಿದ ಕೆಲಸದ ಅಳತೆಯ ವಿಷಯದಲ್ಲಿ ತಕರಾರು ತೆಗೆಯುತ್ತಾರೆ. ಕೆಲಸ ಮಾಡಿ ಕಾಯುತ್ತಿರಬೇಕು. ಅವರು ಇಷ್ಟ ಬಂದಾಗ ಬಂದು ಅಳತೆ ಮಾಡುತ್ತಾರೆ. ಅಲ್ಲಿಯವರಗೂ ನಮಗೆ ಕೂಲಿಯ ಹಣವೇ ಇಲ್ಲ’ ಎಂಬುದು ಗುಲ್ಬರ್ಗದ ಕೂಲಿಕಾರ ತಿಮ್ಮಣ್ಣ ಅವರ ದೂರು.
‘ಉಡುಪಿಯಿಂದ 8 ಕಿ.ಮೀ. ಸಂಚರಿಸಿ ಕೂಲಿ ಮಾಡುತ್ತಿದ್ದೇವೆ. ಪ್ರಯಾಣ ಭತ್ಯೆ ನೀಡುವಂತೆ ಕಾಯ್ದೆಯಲ್ಲಿದ್ದರೂ, ಅಧಿಕಾರಿಗಳು ಪ್ರಯಾಣ ಭತ್ಯೆ ಎಂಬುದು ಕಾಯ್ದೆಯಲ್ಲಿಯೇ ಇಲ್ಲ ಎಂದು ಸುಳ್ಳು ಹೇಳಿ ವಂಚಿಸುತ್ತಾರೆ’ ಎಂದು ಉಡುಪಿಯಿಂದ ಬಂದಿದ್ದ ಕೂಲಿಕಾರ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಹಿರಿಯ ಉಪಾಧ್ಯಕ್ಷ ಜಿ.ಎನ್.ನಾಗರಾಜ್ ಮಾತನಾಡಿ, ‘ಸರ್ಕಾರವು ಜಾರಿಗೆ ತಂದಿರುವ ನರೇಗಾ ಯೋಜನೆಯು ಅನುಷ್ಠಾನದಲ್ಲಿ ವಿಫಲವಾಗಿದೆ. ಯೋಜನೆಯು ಜಾರಿಯಾದ ಆರಂಭದ 2 ವರ್ಷಗಳಲ್ಲಿ ಸುಗಮವಾಗಿ ನಡೆದಿತ್ತು. ಆದರೆ, ಇತ್ತೀಚೆಗೆ ದುರುಪಯೋಗ-ವಾಗುತ್ತಿದೆ ಮತ್ತು ಭ್ರಷ್ಟಾಚಾರ ನಡೆಯುತ್ತಿದೆ’ ಎಂದರು.
‘ಕೂಲಿಕಾರರಿಗೆ ಕೆಲಸವನ್ನು ನೀಡದೆ, ಯಂತ್ರಗಳಿಂದ ಕೆಲಸವನ್ನು ಮಾಡಿಸಿ, ಕೂಲಿಕಾರರಿಗೆ ದೊರೆಯಬೇಕಾದ ಕೂಲಿ ಹಣವನ್ನು, ಅವರ ಉದ್ಯೋಗವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
‘ಅಂಗವಿಕಲರಿಗೂ ಗ್ರಾಮೀಣ ಖಾತರಿ ಯೋಜನೆ ಅಡಿಯಲ್ಲಿ ಕೆಲಸ ನೀಡಬೇಕು. ಇಲಾಖೆ ಸ್ಥಾಪಿಸಿರುವ ಸಹಾಯವಾಣಿಯಿಂದ ಯಾವುದೇ ಪ್ರಯೋಜನವಿಲ್ಲ. ಸಹಾಯವಾಣಿಯಲ್ಲಿ ಕೂಲಿಕಾರರ ಸಮಸ್ಯೆಗಳನ್ನು ಆಲಿಸಿ, ಅದನ್ನು ದಾಖಲೆ ಮಾಡಿಕೊಳ್ಳುವ ಕ್ರಮವನ್ನು ಜಾರಿಗೆ ತರಬೇಕು. ಕನಿಷ್ಠ ಕೂಲಿಯನ್ನು ರೂ 200 ಕ್ಕೆ ಹೆಚ್ಚಿಸಬೇಕು’ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮಾತನಾಡಿ, ‘ನರೇಗಾ ಯೋಜನೆ ಜಾರಿಯಾದಾಗಿನಿಂದ ಕೂಲಿಕಾರರ ಜೀವನಮಟ್ಟ ಸುಧಾರಿಸಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಆದರೆ, ಜಾರಿ ತರುವಲ್ಲಿ ಕೆಲವು ಲೋಪದೋಷಗಳಿವೆ. ಅವುಗಳನ್ನು ಶೀಘ್ರವಾಗಿ ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.
‘ಈ ವರ್ಷದಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಯೋಜನೆಯಲ್ಲಿ 2.20 ಲಕ್ಷ ಜನರು ಕೆಲಸಗಿಟ್ಟಿಸಿದ್ದಾರೆ. ಒಟ್ಟು ರೂ 13 ಕೋಟಿಯಷ್ಟು ಹಣ ಖರ್ಚಾಗಿದೆ. 50 ಲಕ್ಷ ಕೂಲಿಕಾರರಿಗೆ ಉದ್ಯೋಗ ಕಾರ್ಡ್ಗಳನ್ನು ವಿತರಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ಕಾಯಕ ಗುಂಪುಗಳನ್ನು ರಚಿಸಿ, ಕಾಯಕ ಬಂಧುಗಳನ್ನು ನೇಮಿಸುವಂತೆ ಸೂಚನೆ ನೀಡಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.