ಬೆಂಗಳೂರು: ‘ಸ್ವಾತಂತ್ರ್ಯ ಚಳವಳಿ ಎಂದ ತಕ್ಷಣ ಗಾಂಧಿ, ನೆಹರು, ಸುಭಾಷ್ ಚಂದ್ರ ಬೋಸ್ ಹೀಗೆ ಅನೇಕರನ್ನು ಹೆಸರಿಸುತ್ತಾರೆ. ಆದರೆ ಅತ್ಯಂತ ಕೆಳಸ್ತರದವರ ಅಭಿವೃದ್ಧಿಗೆ ಕೆಲಸ ಮಾಡಿದ ಅಂಬೇಡ್ಕರ್ ಅವರನ್ನು ಮಾತ್ರ ಯಾರೂ ನೆನೆಯುವುದಿಲ್ಲ’ ಎಂದು ಪ್ರೊ. ಮ.ನ.ಜವರಯ್ಯ ಅವರು ವಿಷಾದಿಸಿದರು.
ಅಂಬೇಡ್ಕರ್ ಅವರ 125ನೇ ವರ್ಷಾಚರಣೆ ಅಂಗವಾಗಿ ನಗರದಲ್ಲಿ ಶುಕ್ರವಾರ ನ್ಯಾಷನಲ್ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರ ಹಾಗೂ ಸಮುದಾಯ ಕರ್ನಾಟಕ ಜಂಟಿಯಾಗಿ ಆಯೋಜಿಸಿದ್ದ ವರ್ತಮಾನದ ಜತೆ ಡಾ. ಅಂಬೇಡ್ಕರ್ ಮರು ಓದು ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ನಾಯಕ ಎಂದು ಒಪ್ಪಿಕೊಳ್ಳಲೇ ಇಲ್ಲ. ರಾಜಕೀಯದಿಂದಲೂ ಅವರನ್ನು ಕಡೆಗಣಿಸಲಾಗಿತ್ತು. ಹೀಗಾಗಿ ಅವರೊಬ್ಬ ದಲಿತರ ಪ್ರತಿನಿಧಿಯಾಗಿ ಮಾತ್ರ ಬಿಂಬಿತರಾದರು. ಅವರು ದಲಿತರಿಗಷ್ಟೇ ಅಲ್ಲದೆ ಶ್ರಮಿಕ ವರ್ಗ, ಮಹಿಳೆಯರಿಗೂ ದನಿಯಾಗಿದ್ದರು’ ಎಂದು ಅವರು ಹೇಳಿದರು.
ಸಮುದಾಯ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಸುರೇಂದ್ರ ರಾವ್ ಅವರು ಮಾತನಾಡಿ, ‘ಸಾಮಾಜಿಕವಾಗಿ, ಆರ್ಥಿಕವಾಗಿ ದಲಿತರ ಸ್ಥಿತಿಗತಿ ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ. ತಾಲ್ಲೂಕು ಕೇಂದ್ರಗಳಲ್ಲಿ ಈಗಲೂ ಸಹ ದಲಿತರಿಗೆ ಕ್ಷೌರ ಮಾಡಲು ಹಿಂದೇಟು ಹಾಕುತ್ತಾರೆ. ಇದಕ್ಕಾಗಿ ಅಂಬೇಡ್ಕರ್ ಅವರ ಮರು ಓದು ಅತ್ಯವಶ್ಯಕ’ ಎಂದು ಅವರು ಹೇಳಿದರು.
‘ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬೇಕೆಂದು ಅಂಬೇಡ್ಕರ್ ಅವರು ಅಧ್ಯಯನ ನಡೆಸಿ ಸಂವಿಧಾನದಲ್ಲಿ ಜಾತಿ ಸದ್ದು ಮಾಡದಂತೆ ಮಾಡಿದರು. ಇದರಿಂದ ರಾಜಕೀಯವಾಗಿ ದಲಿತರಿಗೆ ಶೋಷಣೆ ತಪ್ಪಿದೆ. ಆದರೆ ಸಾಮಾಜಿಕವಾಗಿ ಇನ್ನೂ ಶೋಷಣೆ ನಡೆಯುತ್ತಿದೆ’ ಎಂದು ತಿಳಿಸಿದರು.