ಬೀದರ್: ‘ಮಾ. 16ರಂದು ಹಮ್ಮಿಕೊಂಡಿದ್ದ ಲೋಕ ಅದಾಲತ್ನಲ್ಲಿ ಬಾಕಿ ಇದ್ದ 16,638 ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ₹10.74 ಕೋಟಿ ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮಪ್ಪ ಕೆ.ಕನಕಟ್ಟೆ ತಿಳಿಸಿದರು.
ಲೋಕ ಅದಾಲತ್ನಲ್ಲಿ ಒಟ್ಟು 37,679 ಪ್ರಕರಣ ಇತ್ಯರ್ಥಗೊಳಿಸಿ, ₹15.32 ಕೋಟಿ ವಸೂಲಾತಿ ಹಾಗೂ ಪರಿಹಾರ ನೀಡಲಾಗಿದೆ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
‘ಜಿಲ್ಲೆಯಾದ್ಯಂತ ಒಟ್ಟು 21,041 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ₹4.58 ಕೋಟಿ ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ. ಬ್ಯಾಂಕ್ ವಸೂಲಾತಿ ಪ್ರಕರಣಗಳಿಗೆ ಸಂಬಂಧಿಸಿ ಜಿಲ್ಲೆಯ ಎಲ್ಲ ಬ್ಯಾಂಕ್ಗಳಿಂದ 7,997 ಪ್ರಕರಣಗಳನ್ನು ಗುರುತಿಸಿ, ಅವುಗಳಲ್ಲಿ 136 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹1.33 ಕೋಟಿ ಬಾಕಿ ವಸೂಲಿ ಮಾಡಲಾಗಿದೆ’ ಎಂದರು.
‘ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳ ನೀರಿನ ತೆರಿಗೆ ಮತ್ತು ಬಿ.ಎಸ್.ಎನ್.ಎಲ್, ಜೆಸ್ಕಾಂ ಬಾಕಿ ಬಿಲ್ ಮತ್ತು ಟ್ರಾಫಿಕ್ ವಸೂಲಾತಿಯಲ್ಲಿ 20,905 ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ₹3.24 ಕೋಟಿ ವಸೂಲಿ ಮಾಡಲಾಗಿದೆ. ಐದು ಜೋಡಿಗಳನ್ನು ರಾಜಿ ಸಂಧಾನದ ಮೂಲಕ ಒಂದುಗೂಡಿಸಲಾಗಿದೆ’ ಎಂದು ಹೇಳಿದರು.