ಔರಾದ್: ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಈಚೆಗೆ ತಾಲ್ಲೂಕಿನ ವಿವಿಧೆಡೆ ಭೇಟಿ ನೀಡಿ ಹಿಂಗಾರು ಬೆಳೆ ವೀಕ್ಷಿಸಿದರು.
ಬೀದರ್ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ, ಕೃಷಿ ತಜ್ಞ ಡಾ.ಜ್ಞಾನದೇವ, ಅಕ್ಷಯಕುಮಾರ ಅವರು ತೋರಣಾ, ಔರಾದ್ ಮತ್ತು ಚಿಂತಾಕಿ ಹೋಬಳಿಯ ಹೊಲಗಳಿಗೆ ಭೇಟಿ ನೀಡಿ ಅಲ್ಲಿಯ ರೈತರ ಜತೆ ಸಮಾಲೋಚನೆ ನಡೆಸಿದರು.
ಈ ಬಾರಿ ಹಿಂಗಾರು ಆರಂಭದಲ್ಲಿ ಸುರಿದ ಮಳೆಯಿಂದ ಬೆಳೆಗಳಿಗೆ ತುಂಬಾ ಅನುಕೂಲವಾಗಿದೆ. ತೊಗರಿ ಫಸಲು ಹೂ ಆಡುವ ಹಂತದಲ್ಲಿದೆ. ಆದರೆ ಕೆಲ ದಿನಗಳಿಂದ ಬೆಳಿಗ್ಗೆ ಹೊತ್ತು ಮಂಜು ಆವರಿಸಿ ಹೂ ಉದುರುತ್ತಿವೆ. ರೈತರು ಈ ಬಗ್ಗೆ ಕಾಳಜಿ ವಹಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಗತ್ಯವಿದೆ ಎಂದರು.
ಇದಕ್ಕಾಗಿ 0.5 ಎಂ.ಎಲ್. ಫ್ಲೆನೋಫಿಕ್ಸ್ ಹಾಗೂ 1 ಎಂ.ಎಲ್. ಬೆವಿಸ್ಟಿನ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡುವಂತೆ ಸಲಹೆ ನೀಡಿದ್ದಾರೆ.
'ಜೋಳದ ಬೆಳೆಗೆ ಅಲ್ಲಲ್ಲಿ ಸೈನಿಕ ಹುಳುವಿನ ಬಾಧೆ ಕಂಡು ಬಂದಿದೆ. ಅಂತಹ ಕಡೆ ಕೀಟ ಇಲ್ಲವೆ ಮೊಟ್ಟೆಯ ಗುಂಪು ಕಂಡಲ್ಲಿ ಕೈಯಿಂದ ಆರಿಸಿ ನಾಶಪಡಿಸಬೇಕು. ಕೀಟದ ಮರಿ ಹುಳು ಇದ್ದಾಗ ಬೇವಿನ ಮೂಲದ ಕೀಟನಾಶಕ ಅಜಾಡಿರಕ್ಟಿನ್ ಅಥವಾ ಜೈವಿಕ ಶಿಲಿಂದ್ರ ಕೀಟ ನಾಶಕ ಮಟಾರೈಜಿಯಮ್ ಸಿಂಪಡಣೆ ಮಾಡಬೇಕು. ಕೀಟದ ತೀವ್ರತೆ ಜಾಸ್ತಿ ಇದ್ದಾಗ ಲ್ಯಾಮ್ಡಸಹಲೋಥ್ರಿನ್ ಕೀಟ ನಾಶಕ ಬಳಸಬೇಕು.
ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ ಆಯಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಭೇಟಿ ಮಾಡುವಂತೆ' ತಾಂತ್ರಿಕ ಕೃಷಿ ಅಧಿಕಾರಿ ಶರಣಕುಮಾರ ರೈತರಲ್ಲಿ ಮನವಿ ಮಾಡಿದ್ದಾರೆ. ಕೃಷಿ ಅಧಿಕಾರಿ ಭೀಮರಾವ ಸಿಂಧೆ ಇದ್ದರು.