ಬಸವಕಲ್ಯಾಣ: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿವೆ. ರೈತರ, ಬಡಜನರ ಪರ ಇರುವ ಜೆಡಿಎಸ್ಗೆ ಮತ ನೀಡುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮನವಿ ಮಾಡಿದರು.
ನಗರದಲ್ಲಿ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಪರವಾಗಿ ಆಯೋಜಿಸಿದ್ದ ಲಿಂಗಾಯತ, ರೆಡ್ಡಿ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.
‘ರಸಗೊಬ್ಬರ ಬೆಲೆ, ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಳವಾಗಿದೆ. ಇದರೊಂದಿಗೆ ಸಾಗಾಣಿಕೆ ವೆಚ್ಚ ಕೂಡ ಜಾಸ್ತಿಯಾಗ್ತಿದೆ. ಮೋದಿ ಅಧಿಕಾರಕ್ಕೆ ಬರುವ ಮುಂಚೆ ಹೊರದೇಶದಲ್ಲಿನ ಕಪ್ಪು ಹಣ ದೇಶಕ್ಕೆ ತರುತ್ತೇವೆ ಅಂತ ಹೇಳಿದ್ರು. ಎಷ್ಟು ಹಣ ಮರಳಿ ದೇಶಕ್ಕೆ ತಂದಿದ್ದಾರೆ. ತಂದು ಯಾರಿಗೆ ಕೊಟ್ಟಿದ್ದಾರೆ’ ಎಂದು ಅವರು ಪ್ರಶ್ನಿಸಿದರು.
ಶಾಸಕ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ‘ನಾವೆಲ್ಲ ರೈತರ ಮಕ್ಕಳು. ರೈತರೇ ನಮ್ಮ ದೇಶದ ಬೆನ್ನೆಲುಬು. ರೈತರ ಪಕ್ಷವಾದ ಜೆಡಿಎಸ್ಗೆ ಬೆಂಬಲ ನೀಡಬೇಕಾಗಿದೆ’ ಎಂದು ಹೇಳಿದರು.
ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ, ಶಾಸಕ ರಾಜಾ ವೆಂಕಟಪ್ಪ ನಾಯಕ, ದೇವದುರ್ಗದ ಕರೆಮ್ಮ ನಾಯಕ, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ರಮೇಶಗೌಡ, ಬೋಜೆಗೌಡ, ರಮೇಶ್ ಪಾಟೀಲ ಸೋಲಾಪೂರ, ಕೃಷ್ಣಾರೆಡ್ಡಿ, ಆನಂದ್ ಪಾಟೀಲ, ಆಕಾಶ ಖಂಡಾಳೆ ಇದ್ದರು.