ಔರಾದ್ (ಬೀದರ್ ಜಿಲ್ಲೆ): ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ವಿಜಯನಗರ ತಾಂಡಾದ (ಬಾರ್ಡರ್) ರೈತರೊಬ್ಬರು ತಮ್ಮ ಹೊಲದಲ್ಲಿ ಬೆಳೆದ 179 ಗಾಂಜಾ ಗಿಡಗಳನ್ನು ಪೊಲೀಸರು ಭಾನುವಾರ ಪತ್ತೆ ಮಾಡಿದ್ದಾರೆ.
ಈ ಸಂಬಂಧ ಆರೋಪಿ ರೈತ ಶಿವಾಜಿ ರಾಠೋಡ್ನನ್ನು ಬಂಧಿಸಿ ₹ 25.54 ಲಕ್ಷ ಮೌಲ್ಯದ 63.86 ಕೆಜಿ ಗಾಂಜಾ ಗಿಡಗಳು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಪಿಐ ರಘುವೀರಸಿಂಗ್ ಠಾಕೂರ್ ನೇತೃತ್ವದಲ್ಲಿ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಅವರ ಸಮಕ್ಷಮದಲ್ಲಿ ಸಂತಪುರ ಹಾಗೂ ಚಿಂತಾಕಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಶಿವಾಜಿ ರಾಠೋಡ್ ತನ್ನ ಸರ್ವೆ ಸಂಖ್ಯೆ 85ರಲ್ಲಿ ಹತ್ತಿ ಹಾಗೂ ತೊಗರಿ ಬೆಳೆ ನಡುವೆ ಅಲ್ಲಲ್ಲಿ ಸುಮಾರು 179 ಗಾಂಜಾ ಗಿಡಗಳು ಬೆಳೆದಿರುವುದು ಪತ್ತೆ ಮಾಡಿ ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸಿದ್ದಾರೆ.