ಔರಾದ್: ತಾಲ್ಲೂಕಿನ ಕೌಠಾ(ಬಿ) ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದರೂ, ಸ್ವಚ್ಛತೆ ಸಮಸ್ಯೆ ಮಾತ್ರ ಪರಿಹಾರ ವಾಗಿಲ್ಲ. ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಕೊಳಚೆ ನೀರು ಕಟ್ಟಿಕೊಂಡು ಹಲವೆಡೆ ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ.
ಸುಮಾರು ಮೂರು ಸಾವಿರ ಜನಸಂಖ್ಯೆ ಇರುವ ಕೌಠಾದಲ್ಲಿ ಅನೇಕ ಸಮಸ್ಯೆಗಳಿವೆ. ಊರಿನ ಪಕ್ಕದಲ್ಲೇ ಮಾಂಜ್ರಾ ನದಿ ಇದ್ದರೂ ಜನ ನೀರಿಗಾಗಿ ಪರದಾಡಬೇಕಿದೆ. ಕಳೆದ ವಾರ ಪ್ರತಿಭಟನೆ ನಡೆಸಿದ ಪರಿ ಣಾಮ ನೀರು ಪೂರೈಕೆ ವ್ಯವಸ್ಥೆ ಸ್ವಲ್ಪ ಸುಧಾರಿಸಿದೆ. ಆದರೆ ಸ್ವಚ್ಛತೆ ಸಮಸ್ಯೆ ಇನ್ನು ಬಗೆಹರಿದಿಲ್ಲ ಎಂದು ದಲಿತ ವಿಮೋಚನೆ ಮಾನವ ಹಕ್ಕು ವೇದಿಕೆ ಜಿಲ್ಲಾ ಸಂಚಾಲಕ ಬಾಬುರಾವ ಕೌಠಾ ಅಸಮಾಧಾನ ಹೊರಹಾಕಿದ್ದಾರೆ.
ಪರಿಶಿಷ್ಟ ಜಾತಿ ಜನ ವಾಸಿಸುವ ಗಲ್ಲಿಯಲ್ಲಿ ಹೆಚ್ಚಿನ ಸಮಸ್ಯೆಗಳಿವೆ. ಚರಂಡಿ ವ್ಯವಸ್ಥೆಯಿಲ್ಲದ ಕಾರಣ ನೀರು ಹೊರ ಹೋಗದೆ ಗಬ್ಬು ನಾರುತ್ತಿದೆ. ಇದರಿಂದಾಗಿ ಅಲ್ಲಿ ವಾಸಿಸುವ ಜನರಿಗೆ ಅನಾರೋಗ್ಯದ ಭೀತಿ ಎದುರಾಗಿದೆ.
ಗ್ರಾಮ ಪಂಚಾಯಿತಿಯಲ್ಲಿ ಸಿ.ಸಿ ರಸ್ತೆ ಹಾಗೂ ಸ್ವಚ್ಛತೆ ಹೆಸರಿನಲ್ಲಿ ಹಣ ಖರ್ಚಾಗಿದೆ. ಆದರೆ ಕೆಲಸ ಮಾತ್ರ ಆಗಿಲ್ಲ. ಅದರಲ್ಲೂ ಪರಿಶಿಷ್ಟ ಜಾತಿ ಬಡಾವಣೆಯಲ್ಲಿ ಮೂಲ ಸೌಲಭ್ಯದ ಕೊರತೆ ನೀಗಿಲ್ಲ. ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡುವಂತೆ ಬೇಡಿಕೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ವಿಷಯದಲ್ಲಿ ಪಂಚಾಯಿತಿಯವರು ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೌಠಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೌಡಗಾಂವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಕ್ರಿಶ್ಚಿಯನ್ ಗಲ್ಲಿಯ ಜನ ಮೊದಲಿ ನಿಂದಲೂ ನೀರಿನ ಸಮಸ್ಯೆ ಎದುರಿಸು ತ್ತಿದ್ದಾರೆ. ಈ ಕುರಿತು ಪಂಚಾಯಿತಿ ಅಧಿಕಾರಿಗಳಿಗಳಿಗೂ ಮನವಿ ಸಲ್ಲಿಸಲಾಗಿದೆ ಎಂದು ಕೌಡಗಾಂವ ನಿವಾಸಿ ಓಂಕಾರ ಸ್ವಾಮಿ ಹೇಳುತ್ತಾರೆ.