ಬೀದರ್: ‘ಪ್ರಧಾನಿ ನರೇಂದ್ರ ಮೋದಿಯವರು ಸ್ಟೇಟ್ಸ್ಮನ್ ಅಲ್ಲ, ಅವರೊಬ್ಬ ಸೇಲ್ಸ್ಮನ್’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.
ಮೋದಿಯವರು ರಾಜ್ಯದ ಹಲವೆಡೆ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ಮೀನು, ಮುಸಲ್ಮಾನ, ಪಾಕಿಸ್ತಾನ ಇದನ್ನು ಮಾತಾಡುತ್ತಿದ್ಧಾರೆ. ನೆಹರೂ ಅವರಿಂದ ಮನಮೋಹನ್ ಸಿಂಗ್ವರೆಗೆ ಪ್ರಧಾನಿಗಳಾದವರು ರಾಜಕೀಯ ಮುತ್ಸದ್ಧಿಗಳಾಗಿದ್ದರು. ರಾಜಕಾರಣದ ಮೇಲೆದ್ದು ಜಾತಿ, ಧರ್ಮ, ಭಾಷೆ ಮೀರಿ ರಾಷ್ಟ್ರದ ಹಿತದೃಷ್ಟಿಯಿಂದ ಮಾತಾಡುತ್ತಿದ್ದರು. ಆದರೆ, ಮೋದಿ ಹತ್ತು ವರ್ಷಗಳಲ್ಲಿ ಸ್ಟೇಟ್ಸ್ಮನ್ಶಿಪ್ ತೋರಿಸಿಲ್ಲ. ಸೇಲ್ಸ್ಮನ್ಶಿಪ್ ಎಂಬುದನ್ನು ತೋರಿಸಿದ್ಧಾರೆ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
23 ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿರುವುದು ನೋಡಿದರೆ ಅವರು ಸ್ಟೇಟ್ಸ್ಮನ್ ಅಲ್ಲ ಸೇಲ್ಸ್ಮನ್ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ರಾಜ ವ್ಯಾಪಾರಿ ಆದರೆ ಪ್ರಜೆಗಳು ಭಿಕಾರಿ ಆಗುತ್ತಾರೆ ಎಂದು ಚಾಣಾಕ್ಯ ಹೇಳಿದ್ದಾನೆ. ಸಂಪತ್ತು, ಆಸ್ತಿ ಮಾರಿ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದೇನೆ ಎಂದು ಭಿಕಾರಿ ಮಾಡಿರುವುದು ಪ್ರಧಾನಿ ಮೋದಿ ಕೆಲಸ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯದ ಗ್ಯಾರಂಟಿಗಳು ಗ್ಯಾರಂಟಿ ಅಲ್ಲ ಮೋದಿನೇ ಗ್ಯಾರಂಟಿ ಎಂದು ಪ್ರಧಾನಿ ಹೇಳಿದ್ದಾರೆ. ಮೋದಿ ಗ್ಯಾರಂಟಿ ಚೀನಾ ವಸ್ತುಗಳಿಗೆ ಇರುವ ವಾರಂಟಿ ಇದ್ದಂತೆ. ಚೀನಾ ವಸ್ತುಗಳಿಗೆ ಇರುವ ಗ್ಯಾರಂಟಿ, ಮೋದಿ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ. ನಮ್ಮ ಗ್ಯಾರಂಟಿಗಳಿಗೆ ವಾರಂಟಿ ಇದೆ. ನಾವು ಹೇಳಿದಂತೆ ಮಾಡಿ ತೋರಿಸಿದ್ದೇವೆ ಎಂದು ಹೇಳಿದರು.
ಮೋದಿ ಅವರ ಭಾಷಣದಲ್ಲಿ ರಾಜ, ಮಹಾರಾಜರನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ. ಆದರೆ, ಮೋದಿಯವರು ಪಾಕಿಸ್ತಾನದಲ್ಲಿ ನವಾಜ್ ಷರೀಫ್ ಅವರ ಮನೆಗೆ ಹೋಗಿ ಬಿರಿಯಾನಿ ತಿಂದು ಬಂದಿದ್ದಾರೆ. ಅಡ್ವಾಣಿ ಅವರಿಗೆ ಲಾಹೋರದಲ್ಲಿರುವ ಮೊಹಮ್ಮದ್ ಅಲಿ ಜಿನ್ನಾ ಅವರ ಮಜಾರ್ ಮೇಲೆ ಪ್ರೀತಿ. ಬಿಜೆಪಿಯವರ ಮಾತು ಮತ್ತು ಕೃತಿಗೂ ಬಹಳ ವ್ಯತ್ಯಾಸವಿದೆ ಎಂದರು.