ಬಸವಕಲ್ಯಾಣ: ಇಲ್ಲಿನ ನಗರಸಭೆಯ 25 ನೇ ವಾರ್ಡ್ ನ ತೆರವಾದ ಸ್ಥಾನಕ್ಕೆ ಶುಕ್ರವಾರ ಮತದಾನ ನಡೆದಿದ್ದು ಬರೀ ಶೇ 51 ರಷ್ಟು ಮಾತ್ರ ಮತದಾನವಾಗಿದೆ.
ಒಟ್ಟು 2826 ಮತದಾರರಲ್ಲಿ 1465 ರಷ್ಟು ಮಾತ್ರ ಮತದಾನವಾಗಿದ್ದು 777 ಪುರುಷರು ಹಾಗೂ 688 ಮಹಿಳೆಯರು ಮತದಾನಗೈದಿದ್ದಾರೆ. ಇಲ್ಲಿ ಸ್ಪರ್ಧಿಸಿದ್ದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆದಿತ್ತಾದರೂ ಮತದಾನದ ಪ್ರಮಾಣ ಕಡಿಮೆ ಆಗಿರುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ದಿಂದ ಗೆದ್ದಿದ್ದ ಈ ವಾರ್ಡ್ ಸದಸ್ಯ ರವೀಂದ್ರ ಗಾಯಕವಾಡ ಅವರು ಬಿಜೆಪಿ ಸೇರ್ಪಡೆಗೊಂಡರು. ಆದ್ದರಿಂದ ಸ್ಥಾನ ತೆರವಾಗಿದೆ. ಪರಿಶಿಷ್ಟ ಜಾತಿಗೆ ಇಲ್ಲಿನ ಸ್ಥಾನ ಮೀಸಲಿದ್ದು ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿಯಿಂದ ಮನೋಜ್ ದಾದೆ, ಕಾಂಗ್ರೆಸ್ ದಿಂದ ಪವನ್ ಗಾಯಕವಾಡ ಮತ್ತು ಜೆಡಿಎಸ್ ದಿಂದ ರಾಹುಲ್ ಶಿಂಧೆ ಸ್ಪರ್ಧಿಸಿದ್ದಾರೆ.
ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿನ 2 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಬೆಳಿಗ್ಗೆ ಮತದಾರರ ಸಾಲು ಕಂಡಿತ್ತಾದರೂ ನಂತರದಲ್ಲಿ ಕಡಿಮೆ ಮತದಾನ ಆಗಿದೆ. ಪ್ರತಿ ಮತಗಟ್ಟೆಯಲ್ಲಿ 5 ಸಿಬ್ಬಂದಿಯಂತೆ 10 ಜನರನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸಲಾಗಿತ್ತು. ಮೇ 22 ರಂದು ಮತ ಎಣಿಕೆ ನಡೆಯಲಿದೆ.
ನಗರಸಭೆಯ ಒಂದೇ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದರೂ ಸ್ಥಳಿಯ ಶಾಸಕ ಶರಣು ಸಲಗರ ಇದನ್ನು ಪ್ರತಿಷ್ಠೆಯ ಕಣವನ್ನಾಗಿಸಿ ಬಿರುಸಿನ ಪ್ರಚಾರಗೈದರು. ಕಾಂಗ್ರೆಸ್, ಮತ್ತು ಜೆಡಿಎಸ್ ಪಕ್ಷದಿಂದಲೂ ಬಿರುಸಿನ ಪ್ರಚಾರ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮುಖಂಡರಾದ ವಿಜಯಸಿಂಗ್, ಮಾಲಾ ನಾರಾಯಣರಾವ್, ಎಐಸಿಸಿ ಸದಸ್ಯ ಆನಂದ ದೇವಪ್ಪ ಹಾಗೂ ಇತರೆ ಮುಖಂಡರು ಪ್ರಚಾರ ಸಭೆ ನಡೆಸಿದರು.
ಬಿಜೆಪಿಯಿಂದ ಶಾಸಕ ಶರಣು ಸಲಗರ ಅವರಲ್ಲದೆ ಇತರೆ ಮುಖಂಡರು ಕೂಡ ಮನೆಮನೆಗೆ ಹೋಗಿ ಪ್ರಚಾರ ನಡೆಸಿದರು. ಜೆಡಿಎಸ್ ದಿಂದ ಶಾಸಕ ಬಂಡೆಪ್ಪ ಕಾಶೆಂಪುರ, ಮುಖಂಡ ಯಶ್ರಬಅಲಿ ಖಾದ್ರಿ ಮೊದಲಾದವರು ಪ್ರಚಾರ ಕೈಗೊಂಡಿದ್ದರು. ಮೊದಲಿನ ಸದಸ್ಯರು ಕಾಂಗ್ರೆಸ್ ನವರಾಗಿದ್ದರು. ಅಲ್ಲದೆ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಆ ಪಕ್ಷ ತನ್ನ ಸ್ಥಾನ ಉಳಿಸಿಕೊಳ್ಳುತ್ತದೋ ಅಥವಾ ಶಾಸಕರ ಪಕ್ಷವಾದ ಬಿಜೆಪಿಯ ಅಭ್ಯರ್ಥಿ ಇಲ್ಲಿ ಗೆಲ್ಲುತ್ತಾರೋ ಕಾದು ನೋಡಬೇಕಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.