ಬೀದರ್: ಶಾಸಕ ಬಿ.ನಾರಾಯಣರಾವ್ ಪಾರ್ಥಿವ ಶರೀರ ಅಂಬುಲೆನ್ಸ್ ಮೂಲಕ ಹೈದರಾಬಾದ್ ಮಾರ್ಗವಾಗಿ ಬಸವಕಲ್ಯಾಣ ಬರುತ್ತಿದೆ.
ಅಂಬುಲೆನ್ಸ್ ಈಗಾಗಲೇ ಸಂಗಾರೆಡ್ಡಿ ದಾಟಿದ್ದು, ಹುಮನಾಬಾದ್ ಮಾರ್ಗವಾಗಿ ಮಧ್ಯಾಹ್ನ 12 ಗಂಟೆಯ ವೇಳೆಗೆ ಬಸವಕಲ್ಯಾಣ ತಲುಪಲಿದೆ.
ಇಂದು (ಶುಕ್ರವಾರ) ಮಧ್ಯಾಹ್ನ 12 ಗಂಟೆಗೆ ಬಸವಕಲ್ಯಾಣದ ಸಸ್ತಾಪುರ ಬಂಗ್ಲಾ ಸಮೀಪದ ಬೊಕ್ಕೆ ಲೇಔಟ್ನಲ್ಲಿ ನಡೆಯಲಿದೆ. ಬೊಕ್ಕೆ ಲೇಔಟ್ ನಗರದ ಹೊರವಲಯದಲ್ಲಿ ಮುಡಬಿ ಕ್ರಾಸ್ನಲ್ಲಿ ಇದೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಕನಿಷ್ಠ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕೋವಿಡ್ 19 ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸಿ ಅಂತ್ಯಕ್ರಿಯೆ ನೆರವೇರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲಾಡಳಿತ ಬಿ.ನಾರಾಯಣರಾವ್ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಹಾಗೂ ಮೆರವಣಿಗೆಗೆ ಅವಕಾಶ ಕಲ್ಪಿಸಿಲ್ಲ. ಎಲ್ಲರೂ ಮನೆಯಲ್ಲೇ ಇದ್ದು ಶಾಸಕರಿಗೆ ಗೌರವ ಸಲ್ಲಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.