ದೇಶದ ಪ್ರತಿ ರಾಜ್ಯಗಳು ತಮ್ಮ ಸಾಂಸ್ಕೃತಿಕ ಅಸ್ಮಿತೆಯ ಬಗ್ಗೆ ಚಿಂತಿಸುತ್ತಿವೆ. ಮಹಾರಾಷ್ಟ್ರ ಛತ್ರಪತಿ ಶಿವಾಜಿ, ತಮಿಳುನಾಡು ತಿರುವಳ್ಳುವರ್, ಪಶ್ಚಿಮ ಬಂಗಾಳ ರವೀಂದ್ರನಾಥ ಟ್ಯಾಗೋರ್, ಕೇರಳ ನಾರಾಯಣಗುರು ಎನ್ನುತ್ತಿವೆ. ಹಾಗಾಗಿ, ನಮ್ಮ ರಾಜ್ಯಕ್ಕೂ ಒಬ್ಬರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಆರಿಸಿಕೊಳ್ಳಬೇಕಾದ ಸಾಮಾಜಿಕ, ಸಾಂಸ್ಕೃತಿಕ ಅವಶ್ಯಕತೆ ಇದೆ. ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಅಸಹಿಷ್ಣುತೆಯಿಂದ ನಲುಗುತ್ತಿರುವ ಈ ಸಂದರ್ಭದಲ್ಲಿ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ಜೀವಿಗಳ ಚಳವಳಿಯನ್ನು ಕಟ್ಟಿ ಮಾನವ ಕುಲಕ್ಕೆ ಬಾಧಿಸಿದ ಎಲ್ಲಾ ರೀತಿಯ ತಾರತಮ್ಯವನ್ನು ತೊಡೆದು ಹಾಕಿ, ಮನುಷ್ಯರಿಂದ ಮನುಷ್ಯರ ಶೋಷಣೆ ಇಲ್ಲದಂತ ನವ ಸಮಾಜ ಕಟ್ಟಲು ಶ್ರಮಿಸಿದರು ಎಂದರು.