ಬೀದರ್: ಕೋವಿಡ್ ಕಾರಣ ಎರಡು ವರ್ಷದ ರದ್ದುಪಡಿಸಲಾಗಿದ್ದ ನಗರದ ಬುತ್ತಿ ಬಸವಣ್ಣ ದೇವಸ್ಥಾನದ ಜಾತ್ರಾ ಮಹೋತ್ಸವವನ್ನು ಏಪ್ರಿಲ್ 30 ರಿಂದ ಮೇ 5 ರ ವರೆಗೆ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀ ಬುತ್ತಿ ಬಸವಣ್ಣ ದೇವಾಲಯ ಟ್ರಸ್ಟ್ ಅಧ್ಯಕ್ಷ ರಮೇಶ ಮಾಶೆಟ್ಟಿ ಹೇಳಿದರು.
ಏಪ್ರಿಲ್ 30 ರಂದು ಬೆಳಿಗ್ಗೆ 6ಕ್ಕೆ ನಂದಿ ಬಸವಣ್ಣ ಮೂರ್ತಿಗೆ ರುದ್ರಾಭಿಷೇಕ ನಡೆಯಲಿದೆ. ಬೆಳಿಗ್ಗೆ 8ಕ್ಕೆ ಷಟಸ್ಥಲ ಧ್ವಜಾರೋಹಣದೊಂದಿಗೆ ಜಾತ್ರೆಗೆ ಚಾಲನೆ ಸಿಗಲಿದೆ. ಸಂಜೆ 7ಕ್ಕೆ ಡಾ. ರಾಜಶೇಖರ ಶಿವಾಚಾರ್ಯರು ಪ್ರವಚನ ನೀಡಲಿದ್ದಾರೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ 1 ರಂದು ಬೆಳಿಗ್ಗೆ 8ಕ್ಕೆ ರಂಗೋಲಿ, ಚಿತ್ರಕಲೆ ಸ್ಪರ್ಧೆ, ರಾತ್ರಿ 7ಕ್ಕೆ ಪ್ರವಚನ ಜರುಗಲಿದೆ. ಮೇ 2 ರಂದು ಬೆಳಿಗ್ಗೆ 8ಕ್ಕೆ 101 ದಂಪತಿಗಳಿಂದ ಲಕ್ಷ ಬಿಲ್ವಾರ್ಚನೆ ನಡೆಯಲಿದೆ. ಸಂಜೆ 7ಕ್ಕೆ ಪ್ರವಚನ ನಡೆಯಲಿದೆ ಎಂದು ಹೇಳಿದರು.
ಮೇ 3 ರಂದು ಬೆಳಿಗ್ಗೆ 8ಕ್ಕೆ ನಗರದಲ್ಲಿ ಬೈಕ್ ರ್ಯಾಲಿ ಜರುಗಲಿದೆ. ಸಂಜೆ 5ಕ್ಕೆ ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ನಡೆಯಲಿದೆ. ಸಂಜೆ 7ಕ್ಕೆ ಡಾ. ಬಸವಲಿಂಗ ಅವಧೂತರು ಪ್ರವಚನ ನಡೆಸಿಕೊಡುವರು. ಡಾ. ರಾಜಶೇಖರ ಶಿವಾಚಾರ್ಯ ಸಾನಿಧ್ಯ ವಹಿಸುವರು. ರಾತ್ರಿ 9ಕ್ಕೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಮೇ 4 ರಂದು ನಸುಕಿನ ಜಾವ ಅಗ್ನಿ ಪೂಜೆ, ಬೆಳಿಗ್ಗೆ 7ಕ್ಕೆ ಪ್ರವಚನ, ಸಂಗೀತ, ರಾತ್ರಿ 8ಕ್ಕೆ ರಥೋತ್ಸವ, ಮೇ 5 ರಂದು ಬೆಳಿಗ್ಗೆ ಕುಸ್ತಿ ಸ್ಪರ್ಧೆಗಳು ಜರುಗಲಿವೆ ಎಂದು ಹೇಳಿದರು.
ದೇವಾಲಯ ಟ್ರಸ್ಟ್ ಉಪಾಧ್ಯಕ್ಷರಾದ ಅಮೃತರಾವ್ ಟೋಕರೆ, ಸಂದೀಪ್ ಮಾಶೆಟ್ಟಿ ಚಿದ್ರಿ, ಕಾರ್ಯದರ್ಶಿ ಸಂಗಶೆಟ್ಟಿ ಬಿರಾದಾರ ಚಿದ್ರಿ ಇದ್ದರು.