ಬೀದರ್: ಜಿಲ್ಲೆಯ ಗಡಿಯಲ್ಲಿ ಇರುವ ರತ್ನಾಪುರದ ಬಸವಲಿಂಗ ಮೂಲಗೆ ಭಗವದ್ಗೀತೆ ಕಂಠ ಪಾಠ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ಬಸವಲಿಂಗ ಅವಧೂತ ಆಶ್ರಮದಲ್ಲಿ ಒಂದು ವರ್ಷ ಭಗವದ್ಗೀತೆಯ ಎಲ್ಲ 770 ಶ್ಲೋಕಗಳ ಅಧ್ಯಯನ ಮಾಡಿದ ಅವರು, ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶ್ರಮ ನಡೆಸಿದ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಬಸವಲಿಂಗ ಅವರು ರೈತ ದಂಪತಿ ಗಿರಿಜಾ ಹಾಗೂ ಶಿವಕುಮಾರ ಮೂಲಗೆ ಅವರ ಪುತ್ರರಾಗಿದ್ದಾರೆ. ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಪ್ರಮಾಣ ಪತ್ರ ಹಾಗೂ ಚಿನ್ನದ ಪದಕ ಪ್ರದಾನ ಮಾಡಿದರು.
ಭಗವದ್ಗೀತೆ ಕಂಠ ಪಾಠ ಪರೀಕ್ಷೆಯಲ್ಲಿ ಬಸವಲಿಂಗ ಮೂಲಗೆ ಅವರ ಸಾಧನೆಗೆ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.