ಭಾಲ್ಕಿ: ಇಲ್ಲಿನ ನಗರ ಠಾಣೆಯ ಪೊಲೀಸರು ಇಬ್ಬರು ಅಂತರರಾಷ್ಟ್ರೀಯ ಕಳ್ಳರನ್ನು ಬಂಧಿಸಿದ್ಧಾರೆ. ₹16 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಬಸವಕಲ್ಯಾಣ ತಾಲ್ಲೂಕಿನ ಯಲ್ಲದಗಂಡಿ ಗ್ರಾಮದ ಪರಶುರಾಮ ಬಾಬುರಾವ್, ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಕೇಡಗಾಂವದ ಏಕನಾಥನಗರದ ಅಂಕುಶ ಲಕ್ಷ್ಮಣ ಬಂಧಿತರು.
ಸಿಪಿಐ ರಮೇಶ ಮೈಲೂರಕರ್ ಗುರುವಾರ ರಾತ್ರಿ ಗಸ್ತಿನಲ್ಲಿದ್ದಾಗ ಸಂಶಯಾಸ್ಪದವಾಗಿ ಅಡಗಿಕೊಳ್ಳುತ್ತಿದ್ದ ಕಳ್ಳರಿಬ್ಬರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸುಭಾಷ ವೃತ್ತದ ಮನೆಯನ್ನು ಹಗಲು ಹೊತ್ತಿನಲ್ಲಿ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ ಬ್ಯಾಕೋಡ, ಡಿವೈಎಸ್ಪಿ ದೇವರಾಜ್ ಬಿ. ಮಾರ್ಗದರ್ಶನದಂತೆ ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಗಳು ಜಿಲ್ಲೆಯ ಭಾಲ್ಕಿ, ಔರಾದ್, ಸಂತಪೂರ, ಕಮಲನಗರ, ಹುಮನಾಬಾದ್, ಮಂಠಾಳ, ಹುಲಸೂರ ಸೇರಿದಂತೆ ಒಟ್ಟು 10 ಹಗಲುಗಳ್ಳತನ ಮಾಡಿದ್ದಾರೆ.
ಕುಟುಂಬಸ್ಥರು ಉದ್ಯೋಗಕ್ಕಾಗಿ ತೆರಳಿದಾಗ ಮನೆಯ ಕೀಲಿಯನ್ನು ರಾಡ್ನಿಂದ ಒಡೆದು, ಅಲ್ಮೆರಾದಲ್ಲಿದ್ದ ಚಿನ್ನ, ಬೆಳ್ಳಿ, ನಗದು ದೋಚುತ್ತಿದ್ದೆವು ಎಂದು ತಿಳಿಸಿದ್ದಾರೆ.
ಕಳ್ಳರಿಂದ ಅಂದಾಜು 270 ಗ್ರಾಂ. ಚಿನ್ನ, ಅರ್ಧ ಕೆ.ಜಿ ಬೆಳ್ಳಿ, ₹10 ಸಾವಿರ ನಗದು, ಒಂದು ಮೊಟರ್ ಸೈಕಲ್ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೊತ್ತ ₹15.71 ಲಕ್ಷ ಆಗಿದೆ.
ವಿಚಾರಣೆ ತಂಡದಲ್ಲಿ ಸಿಪಿಐಗಳಾದ ವಿಜಯಕುಮಾರ, ಪಾಲಕ್ಷಯ್ಯ, ಬೆರಳಚ್ಚು ವಿಭಾಗದ ಪಿಎಸ್ಐ ಸಂತೋಷ, ವಿಜಯಕುಮಾರ, ಅಮರ ಕುಲಕರ್ಣಿ, ಶೇಕಶಾ ಪಟೇಲ್ ಸಿಬ್ಬಂದಿ ಉಮಾಕಾಂತ ದಾನಾ, ನಾಗಪ್ಪ ಖೇಡೆ, ಉತ್ತಮ, ರಮೇಶ ಮೇತ್ರೆ, ಹಾವಣ್ಣ ಪೂಜಾರಿ, ಸಚಿನ್, ಶಿವರಾಜ, ವಿನೋದ ಹಾಗೂ ವಿನೋದ ಮೆಹಕರ ಕಾರ್ಯನಿರ್ವಹಿಸಿದ್ದಾರೆ.
ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಸಿಪಿಐ ರಮೇಶ ಮೈಲೂರಕರ್ ನೇತೃತ್ವದ ತಂಡದ ಕಾರ್ಯವನ್ನು ಡಿವೈಎಸ್ಪಿ ದೇವರಾಜ್ ಬಿ., ಶ್ಲಾಘಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.