ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ವ್ಯಸನಮುಕ್ತ ಗ್ರಾಮಕ್ಕಾಗಿ ಅಕ್ಕನ ಪಾದಯಾತ್ರೆ

ದುರ್ಗುಣಗಳನ್ನು ಚೀಟಿಯ ಮೇಲೆ ಬರೆದು ಅಕ್ಕನ ಜೋಳಿಗೆಗೆ ಹಾಕಿದರು..
Last Updated 17 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಬೀದರ್‌: ಹಾರೂರಗೇರಿಯನ್ನು ವ್ಯಸನಮುಕ್ತಗೊಳಿಸುವ ಸಂಕಲ್ಪದಿಂದ ಅಕ್ಕ ಅನ್ನಪೂರ್ಣ ಗುರುವಾರ ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ ದುಶ್ಚಟಗಳ ಭಿಕ್ಷೆ ಯಾಚಿಸಿದರು.

’ಹಾರೂರಗೇರಿಯು ವ್ಯಸನಗಳಿಂದ ಮುಕ್ತವಾಗಿ ನೈತಿಕ, ಸಾಂಸ್ಕೃತಿಕ ವೈಭವಗಳಿಂದ ಮೆರೆಯುವಂತಾಗಬೇಕು ಎನ್ನುವ ಕಳಕಳಿಯಿಂದ ಎರಡು ದಿನಗಳ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಅಕ್ಕಅನ್ನಪೂರ್ಣ ತಿಳಿಸಿದರು.

‘ತಾಯಿ, ಗುರು, ಸೋದರಿಯಾಗಿ ನಿಮ್ಮೆಲ್ಲರ ಹಿತೈಷಿಯಾಗಿ ಬೇಡಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ದುಶ್ಚಟಗಳನ್ನು ನಿಮ್ಮಕ್ಕನ ಜೋಳಿಗೆಗೆ ಹಾಕಿ ನಿತಿವಂತರಾಗಿ ನಿಮ್ಮ ಕುಟುಂಬಕ್ಕೆ ಆಶ್ರಯದಾತರಾಗಬೇಕು’ ಎಂದು ಅಂಗಲಾಚಿದರು.

ಊರವರು ಮದ್ಯಪಾನ, ಗುಟಕಾ, ತಂಬಾಕು ಸೇವನೆ, ಬೀಡಿ-ಸಿಗರೇಟು, ಇಸ್ಪೇಟ್ ಮುಂತಾದ ದುಶ್ಚಟ-ದುರ್ಗುಣಗಳನ್ನು ಚೀಟಿಯ ಮೇಲೆ ಬರೆದು ಅಕ್ಕನ ಜೋಳಿಗೆಗೆ ಹಾಕಿ ಪಾದಕ್ಕೆರಗಿ ವ್ಯಸನಮುಕ್ತರಾಗುತ್ತೇವೆಂದು ಪ್ರತಿಜ್ಞೆಗೈದರು.

ವ್ಯಸನ ಮುಕ್ತ ಗೈದವರಿಗೆ ಅಕ್ಕನವರು ವಚನಗ್ರಂಥವನ್ನು ನೀಡಿ ಹೊಸ ಬದುಕಿಗೆ ಶುಭ ಹಾರೈಸುತ್ತಾ ಮುನ್ನಡೆಯುತ್ತಿರುವ ದೃಶ್ಯ ಹೃದಯಸ್ಪರ್ಶಿಯಾಗಿತ್ತು. ಅನೇಕ ಮನೆಗಳಲ್ಲಿ ರಾತ್ರಿ ಕುಡಿದ ಅಮಲಿನಲ್ಲಿಯೇ ಮಲಗಿದ್ದವರನ್ನು ಎಬ್ಬಿಸಿ ತಿಳಿಹೇಳಿ, ಜರಿದು, ಜಂಕಿಸಿ ಬುದ್ಧಿಹೇಳಿ, ವ್ಯಸನಮುಕ್ತರಾಗಲು ಪ್ರೇರಣೆ ನೀಡಿದರು.

ಮಕ್ಕಳು ಓಡೋಡಿ ಬಂದು “ನಮ್ಮ ಮನೆಗೆ ಬನ್ನಿ” ಎಂದು ಕರೆಯುತ್ತಾ ತಮ್ಮ ಕುಟುಂಬದ ಹಿರಿಯರ ದುಶ್ಚಟಗಳ ಬಗ್ಗೆ ವಿವರಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಕೆಲವು ಕುಟುಂಬಗಳಲ್ಲಿ ಕುಡಿತದ ಚಟದಿಂದ 37-40 ವಯಸ್ಸಿನವರಾದರೂ ಮದುವೆಯಾಗದೇ ಇರುವುದು ಚಟಗಳ ಪರಿಣಾಮವನ್ನು ಸಾರುವಂತಿತ್ತು. ಅನೇಕ ಕುಟುಂಬಗಳ ದುಸ್ಥಿತಿಯನ್ನು ಕಂಡು ಅಕ್ಕನವರೂ ಕಣ್ಣೀರಿನ ಬಾಷ್ಪ ಸುರಿಸಿದರು.

ಶ್ರೀ ಬಸವೇಶ್ವರ ದೇವಾಲಯದಲ್ಲಿ ವಿವಿಧ ಶರಣರ ಮೂರ್ತಿಗಳ ಅನಾವರಣ ಹಾಗೂ ಹತ್ತು ದಿನಗಳ ಪ್ರವಚನದ ಪ್ರಯುಕ್ತ ವ್ಯಸನ ಮುಕ್ತ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಬಸವ ಸಮಿತಿಯು ಪೂರ್ಣ ಸಹಯೋಗ ನೀಡಿತು.

ಬಸವ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ, ಬಸವರಾಜ ಅಮಾಜಿ, ವಿಶ್ವನಾಥ ಕಾಜಿ, ಗಣಪತಿ ಕೋಡಗೆ, ಚನ್ನಬಸವ ಹಂಗರಗಿ, ಜಗನ್ನಾಥ ಕಾಜಿ, ಪ್ರಭು ವಡ್ಡಿ, ಅರವಿಂದ ಕಾಜಿ, ನಾಗಶೆಟ್ಟಿ ಹೊಕರಾಣಿ, ಹಾವಶೆಟ್ಟಿ ಪಾಟೀಲ, ಜಗನ್ನಾಥ ಚಿಮಕೋಡೆ ಮತ್ತು ನೀಲಮ್ಮನ ಬಳಗದ ಸದಸ್ಯರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪಾದ ಯಾತ್ರೆಯಲ್ಲಿ ಮಕ್ಕಳೂ ಸಹ ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಹೆಜ್ಜೆ ಹೆಜ್ಜೆಗೆ ‘ಅಕ್ಕನ ಜೋಳಿಗೆ - ಬೆಳಕು ನಮ್ಮ ಬಾಳಿಗೆ’ ಎಂಬ ಘೋಷಣೆಗಳು ಮೊಳಗಿದವು. ಶರಣ-ಶರಣೆಯರು ಪಾದಯಾತ್ರೆಯಲ್ಲಿ ಸಂಭ್ರಮ ಸಡಗರದಿಂದ ಸಾಗುತ್ತಿರುವುದು ಕಣ್ಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT