ಹುಮನಾಬಾದ್: ‘ಉತ್ತಮ ಆರೋಗ್ಯಕ್ಕೆ ನುಗ್ಗೆಕಾಯಿ ಸೊಪ್ಪು ಸಹಕಾರಿ. ಪ್ರತಿ ಮನೆಯಲ್ಲೂ ನುಗ್ಗೆ ಸಸಿ ನೆಟ್ಟು ಪೋಷಿಸಬೇಕು’ ಎಂದು ಪರಿಸರವಾದಿ ಶೈಲೆಂದ್ರ ಕಾವಡಿ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪರಿಸರ ವಾಹಿನಿ ವತಿಯಿಂದ ಇಲ್ಲಿಗೆ ಸಮೀಪದ ಗಡವಂತಿ ಗ್ರಾಮದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ತಾಯಿಗೊಂದು ಸಸಿ ಶಿಶುವಿಗೊಂದು ಸಸಿ’ ಅಭಿಯಾನದಲ್ಲಿ ಅವರು ಮಾತನಾಡಿದರು.
ನುಗ್ಗೆಕಾಯಿ ಸೊಪ್ಪನ್ನು ನಿಯಮಿತವಾಗಿ ಸೇವಿಸಬೇಕು.ಅದು ರಕ್ತದಲ್ಲಿಯ ಸಕ್ಕರೆ ಮಟ್ಟದ ಸಮತೋಲನವನ್ನು ಕಾಪಾಡುತ್ತದೆ. ಅಲ್ಲದೆ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹೃದಯದ ಆರೋಗ್ಯಕ್ಕೂ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಸದಾಶಿವ ವಿಭೂತಿ ಮಾತನಾಡಿ,‘ಪ್ರತಿ ಮನೆಯಲ್ಲಿ ಅಮೃತ ಬಳ್ಳಿ, ನವಳ ಸರ, ನೆಲ್ಲಿಕಾಯಿ ಹಾಗೂ ನಿಂಬೆ ಗಿಡ ಸೇರಿದಂತೆ ವಿವಿಧ ಆಯುರ್ವೇದಿಕ ಗಿಡಗಳನ್ನು ಬೆಳೆಸಿ ಉಳಿಸಬೇಕು’ ಎಂದು ಹೇಳಿದರು.
ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದ ಕಾರ್ಯದರ್ಶಿ ಗುಂಡಪ್ಪ ದೊಡ್ಡಮನಿ, ಶಿವಾಜಿ ಹಾಗೂ ಸಂಗಮ್ಮಾ ಸಂತೋಷ ತೆಲಂಗ್ ಇದ್ದರು.