ಬೀದರ್: ಹುಮನಾಬಾದ್ ತಾಲ್ಲೂಕಿನ ನಂದಗಾಂವ ಗ್ರಾಮದ ಬಾಲಕಿಯೊಬ್ಬರ ವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ತಡೆದಿದೆ.
15 ವರ್ಷದ ಬಾಲಕಿಯ ವಿವಾಹ ನಡೆಯುತ್ತಿರುವ ಬಗ್ಗೆ ಆರ್ಬಿಟ್ ಸಂಸ್ಥೆಯ ಮಕ್ಕಳ ಸಹಾಯವಾಣಿಗೆ ಕರೆ ಬಂದಿತು. ಅದನ್ನು ಆಧರಿಸಿ ಬಾಲಕಿ ಮನೆಗೆ ಭೇಟಿ ನೀಡಿದ ಘಟಕದ ಅಧಿಕಾರಿಗಳು, ಆರ್ಬಿಟ್ ಸಂಸ್ಥೆ ಸಿಬ್ಬಂದಿ, ಪೊಲೀಸರು ಹಾಗೂ ಪಂಚಾಯಿತಿ ಪ್ರತಿನಿಧಿಗಳು ವಿವಾಹವನ್ನು ತಡೆದರು.
ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮ, ಎದುರಿಸಬೇಕಾದ ಕಾನೂನು ಕ್ರಮಗಳ ಕುರಿತು ಬಾಲಕಿ ಹಾಗೂ ವರನ ಪಾಲಕರಿಗೆ ತಿಳಿವಳಿಕೆ ನೀಡಿದರು. ಬಾಲಕಿಗೆ 18 ವರ್ಷ ತುಂಬುವವರೆಗೆ ಮದುವೆ ಮಾಡಿಸುವುದಿಲ್ಲ ಎಂದು ಪಾಲಕರಿಂದ ಮುಚ್ಚಳಿಕೆ ಬರೆಸಿಕೊಂಡರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಬಿಕಾ, ಹಳ್ಳಿಖೇಡ(ಬಿ) ಪೊಲೀಸ್ ಠಾಣೆಯ ಬಸಯ್ಯ ಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿರಾಜ ಭಮ್ಮಶೆಟ್ಟಿ, ಆರ್ಬಿಟ್ ಮಕ್ಕಳ ಸಹಾಯವಾಣಿಯ ಅರುಣ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ದೈವತಾ ಇದ್ದರು.