ಬಸವಕಲ್ಯಾಣ (ಬೀದರ್ ಜಿಲ್ಲೆ): ‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಸರ್ವಸಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಟಿಕೆಟ್ ದೊರೆಯದಿದ್ದಾಗ ಅಸಮಾಧಾನಗೊಳ್ಳುವವರು ಈಗಲೇ ಪಕ್ಷ ಬಿಟ್ಟು ಹೋಗಬಹುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಖಂಡತುಂಡವಾಗಿ ಹೇಳಿದರು.
ಇಲ್ಲಿಯ ಬೇಗ್ ಫಂಕ್ಷನ್ ಹಾಲ್ನಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ‘ಉಪ ಚುನಾವಣೆಯಲ್ಲಿ ಸ್ಪರ್ಧಿಸಲು 16 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಜಾತಿ, ಧರ್ಮದ ಆಧಾರದ ಮೇಲೆ ಟಿಕೆಟ್ ಕೊಡುವುದಿಲ್ಲ. ಪಕ್ಷದ ನಿಷ್ಠೆಯೇ ಟಿಕೆಟ್ಗೆ ಮಾನ ದಂಡವಾಗಲಿದೆ’ ಎಂದು ಹೇಳಿದರು.
‘ಒಬ್ಬರಿಗೆ ಪಕ್ಷದ ಟಿಕೆಟ್ ಕೊಟ್ಟರೆ ಉಳಿದವರು ಅವರನ್ನು ಸೋಲಿಸುವ ಕೆಲಸ ಮಾಡಬಾರದು. ವೈಯಕ್ತಿಕ ದ್ವೇಷದಿಂದ ಪಕ್ಷಕ್ಕೆ ಹಾನಿಯಾಗಬಾರದು. ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.
‘ಪ್ರಜಾಪ್ರಭುತ್ವದಲ್ಲಿ ಪೈಪೋಟಿ ಇರುತ್ತದೆ. ರಾಜ್ಯದ ಜನತೆ ಬಸವಕಲ್ಯಾಣವನ್ನು ಎದುರು ನೋಡುತ್ತಿದ್ದಾರೆ. ಮಾನವ ಧರ್ಮ, ಕಾಂಗ್ರೆಸ್ ಜಾತಿ, ಬಸವ ತತ್ವ ನೀತಿಯಿಂದಾಗಿ ಇಲ್ಲಿಯ ಜನ ಕಾಂಗ್ರೆಸ್ನ ಸಾಮಾನ್ಯ ಕಾರ್ಯಕರ್ತ ಬಿ. ನಾರಾಯಣರಾವ್ ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಿದ್ದರು’ ಎಂದು ತಿಳಿಸಿದರು.