ಬೀದರ್: ‘ಪ್ರಜಾಪ್ರಭುತ್ವದ ಅಮೂಲ್ಯ ಗ್ರಂಥ ಭಾರತದ ಸಂವಿಧಾನ. ಸುಮಂತ ಕಟ್ಟಿಮನಿ ಅವರು ನಿರಂತರವಾಗಿ ‘ಮನೆ ಮನೆಗೆ ಸಂವಿಧಾನ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಸಂವಿಧಾನ ಪ್ರತಿಗಳನ್ನೇ ವಿತರಿಸುತ್ತಿರುವುದು ಶ್ಲಾಘನೀಯ’ ಎಂದು ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಲೋಕಮಂಚ್ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ಮನೋಹರ ಹೇಳಿದರು.
ಶರಣ ನಗರದ ಸುಮಂತ ನಿವಾಸದಲ್ಲಿ ಶ್ರೀವೆಲ್ನೆಸ್ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಿದ್ದ ಮನೆ ಮನೆಗೆ ಸಂವಿಧಾನದ ಮತ್ತು ಉಚಿತ ಸಂವಿಧಾನ ಪೀಠಿಕೆ ಪ್ರತಿ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಬರೆದ ಸಂವಿಧಾನಕ್ಕೆ 72 ವರ್ಷಗಳು ತುಂಬುತ್ತಿವೆ. 2025ರಲ್ಲಿ ಸಂವಿಧಾನದ ಅಮೃತ ಮಹೋತ್ಸವ ಆಚರಣೆಯಾಗಲಿದೆ. ಈ ದಿಸೆಯಲ್ಲಿ ನೆನಪಿನ ಕಾಣಿಕೆಯಾಗಿ ಎರಡು ಸಾವಿರ ಸಂವಿಧಾನದ ಪ್ರತಿಗಳನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ ಎಂದು ತಿಳಿಸಿದರು.
ಆದಿವಾಸಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಗುಮ್ಮೆ ಮಾತನಾಡಿದರು. ಜೆಸ್ಕಾಂ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು.
ಕೆಪಿಟಿಸಿಎಲ್ ನೌಕರರ ಸಂಘದ ಮಾಜಿ ಉಪಾಧ್ಯಕ್ಷ ಕಾಶೀನಾಥ ಬೆಲ್ದಾಳೆ, ಖಾದಿ ಗ್ರಾಮೋದ್ಯೋಗ ಮಂಡಳಿಯ ಮಾಜಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ, ಮಹಾದೇವ ತರನಳ್ಳಿ ಇದ್ದರು.