ಕಮಲನಗರ: ಕೋವಿಡ್ ಸೋಂಕಿನ ರೂಪಾಂತರಿ ಓಮೈಕ್ರಾನ್ ಹಬ್ಬುವಿಕೆ ತಡೆಗೆ ಪಟ್ಟಣದ ಮಹಾರಾಷ್ಟ್ರದ ಗಡಿಯಲ್ಲಿ ಸ್ಥಾಪಿಸಲಾದ ಚೆಕ್ ಪೋಸ್ಟ್ನಲ್ಲಿ ಪ್ರಯಾಣಿಕರ ತಪಾಸಣೆ ನಡೆಯಿತು.
ಪಟ್ಟಣದಲ್ಲಿ ಹಾದುಹೋದ ನಾಂದೇಡ್- ಜಹಿರಾಬಾದ್ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಚೆಕ್ ಪೋಸ್ಟ್ ಇದ್ದು, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಪರಿಶೀಲನೆ, ಲಸಿಕೆ ಪಡೆದಿರುವಿಕೆ, ಆರ್ಟಿಪಿಸಿಆರ್ ವರದಿ ಪರೀಕ್ಷಿಸಲಾಯಿತು.
ಲಸಿಕೆ ಪಡೆಯದವರಿಗೆ ಸ್ಥಳದಲ್ಲೇ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ನೀಡುತ್ತಿದ್ದಾರೆ. ಕೋವಿಡ್ ನೆಗೆಟಿವ್ ವರದಿ ಇಲ್ಲದ್ದವರನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಮಲನಗರ ಕ್ರೈಂ ಪಿಎಸ್ಐ ಬಸವ ರಾಜ ಪಾಟೀಲ, ಎಎಸ್ಐ ಚಿದಾ ನಂದ ಮಠ, ಸಿಬ್ಬಂದಿ ಅಂಕುಶ ಭವರಾ, ಚಂದ್ರಶೇಖರ್, ಭೀಮಾ ಶಂಕರ, ಆರೋಗ್ಯ ಸಿಬ್ಬಂದಿ ಕುಸುಮ ಸೂರ್ಯವಂಶಿ, ಎಚ್ಐಒ ಶಿವಕುಮಾರ ತಗಾರೆ, ನಂದಕುಮಾರಿ, ಅನೀಲ ಕುಮಾರ, ರಾಜಕುಮಾರ ಇದ್ದರು.
ಕಠಿಣ ಕ್ರಮಗಳು
ಬಸವಕಲ್ಯಾಣ: ಕೋವಿಡ್ ರೂಪಾಂತರಿ ಓಮೈಕ್ರಾನ್ ಹರಡುವಿಕೆ ತಡೆಗೆ ತಾಲ್ಲೂಕು ಆಡಳಿತ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಮಹಾರಾಷ್ಟ್ರ ಗಡಿಯಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಮನ್ನಳ್ಳಿ ಕ್ರಾಸ್ನಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಪೊಲೀಸರು ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ತಡೆದು, ಚಾಲಕ ಮತ್ತು ಪ್ರಯಾಣಿಕರ ತಪಾಸಣೆ ನಡೆಸುತ್ತಿದ್ದಾರೆ. ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದಾರೆ. ಲಸಿಕೆ ಪಡೆದ ದಾಖಲೆಗಳು ಇಲ್ಲದಿದ್ದರೆ ಹಿಂದಕ್ಕೆ ಕಳುಹಿಸಲಾಗುತ್ತಿದೆ ಎಂದು ನಿಯೋಜನೆಗೊಂಡ ವೈದ್ಯರು ತಿಳಿಸಿದ್ದಾರೆ.