ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ₹14 ಲಕ್ಷ ದೋಚಿದ ಕಳ್ಳರು

Last Updated 27 ಜುಲೈ 2021, 16:14 IST
ಅಕ್ಷರ ಗಾತ್ರ

ಬೀದರ್: ತಾಲ್ಲೂಕಿನ ಕೊಳಾರ(ಕೆ) ಕೈಗಾರಿಕಾ ಪ್ರದೇಶದಲ್ಲಿ ಇರುವ ಬಸವೇಶ್ವರ ದಾಲ್ ಮಿಲ್ ಸಮೀಪ ಕಳ್ಳರಿಬ್ಬರು ಬೈಕ್ ತಡೆದು ₹ 14.18 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.

ಖೈನಿ ವ್ಯವಹಾರ ನಡೆಸುವ ಬಾಲಾಜಿ ಸೆಲ್ಸ್ ಕಾರ್ಪೋರೇಷನ್ ಉದ್ಯೋಗಿಗಳಾದ ರಾಕೇಶಕುಮಾರ ಚೌಧರಿ ಹಾಗೂ ಗೋಪಾಲ್ ಎಂಬುವರು ಸೋಮವಾರ ಬ್ಯಾಗ್‍ನಲ್ಲಿ ಹಣ ಇಟ್ಟುಕೊಂಡು ಬೈಕ್ ಮೇಲೆ ಕೊಳಾರ (ಕೆ) ಕೈಗಾರಿಕಾ ಪ್ರದೇಶದಲ್ಲಿ ಇರುವ ಕಂಪನಿಯ ಕಚೇರಿಗೆ ತೆರಳುತ್ತಿದ್ದರು. ಬೈಕ್ ಮೇಲೆ ಅವರನ್ನು ಹಿಂಬಾಲಿಸಿಕೊಂಡು ಬಂದ ಕಳ್ಳರು, ಬೈಕ್‍ಗೆ ಅಡ್ಡಗಟ್ಟಿ ತಡೆದು, ಚಾಕು ತೋರಿಸಿ, ಹಣದ ಬ್ಯಾಕ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಬೀದರ್‌ನ ನಾಲ್ಕು ಅಂಗಡಿಗಳಿಂದ ಹಣ ವಸೂಲಿ ಮಾಡಿಕೊಂಡು ಬ್ಯಾಗ್‍ನಲ್ಲಿ ಇಟ್ಟುಕೊಂಡು ಕಂಪನಿ ಕಚೇರಿಗೆ ಹೊರಟಿದ್ದೇವು. ಬೈಕ್ ಮೇಲೆ ಬಂದ ಇಬ್ಬರು ಮೊದಲು ಬೈಕ್ ತಡೆದರು. ಒಬ್ಬ ಬೈಕ್ ಬೀಗ ತೆಗೆದು ಬಿಸಾಡಿದರೆ, ಮತ್ತೊಬ್ಬ ಹೆದರಿಸಿ ಬ್ಯಾಗ್ ಕಿತ್ತುಕೊಳ್ಳಲು ಪ್ರಯತ್ನಿಸಿದ. ನಂತರ ಚಾಕು ತೆಗೆದು ದಾಳಿಗೆ ಯತ್ನಿಸಿದಾಗ ತಡೆದಿದ್ದಕ್ಕೆ ಕೈಗೆ ಗಾಯವಾಯಿತು. ಗೋಪಾಲ್ ಹೆದರಿ ದೂರ ಹೋಗಿ ನಿಂತಾಗ, ಕಳ್ಳರು ಬ್ಯಾಗ್ ಕಿತ್ತುಕೊಂಡು ಪರಾರಿಯಾದರು ಎಂದು ರಾಕೇಶಕುಮಾರ ಚೌಧರಿ ನ್ಯೂ ಟೌನ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಬಾಲಾಜಿ ಸೆಲ್ಸ್ ಕಾರ್ಪೋರೇಷನ್ ಅಹಮ್ಮದಾಬಾದ್‍ನಿಂದ ಅಂಬರ್ ಖೈನಿ (ಮಸಾಲಾಪುಡಿ) ತರಿಸಿಕೊಂಡು ಬೀದರ್‌ನಲ್ಲಿ ವ್ಯವಹಾರ ನಡೆಸುತ್ತಿದೆ. ನಿತ್ಯ ಖೈನಿ ಮಾರಾಟ ಮಾಡಿದ ಅಂಗಡಿಗಳಿಂದ ಹಣ ವಸೂಲಿ ಮಾಡಿ ಕಂಪನಿ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರಿಗೆ ಶೋಧ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT