ಬೆಳೆ ವಿಮೆ, ಮಾಸಾಶನ ವಿಳಂಬ: ಫಲಾನುಭವಿಗಳ ಆಕ್ರೋಶ; ತಹಶೀಲ್ದಾರ್ಗೆ ಮನವಿ ಸಲ್ಲಿಕೆ

ಔರಾದ್: ಕಳೆದ ಸಾಲಿನ ಬೆಳೆ ವಿಮೆ ಪರಿಹಾರ ತಕ್ಷಣ ಪಾವತಿಸುವಂತೆ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಂಭಾಜಿ ಬ್ರಿಗೇಡ್ನ ತಾಲ್ಲೂಕು ಘಟಕದ ಅಧ್ಯಕ್ಷ ವಸಂತ ವಾಸರೆ, ಕಿಸಾನ್ ಸೇನಾ ಸಂಘದ ಅಧ್ಯಕ್ಷ ಸಂದೀಪ ಪಾಟೀಲ ನೇತೃತ್ವದಲ್ಲಿ ರೈತರು ಸೋಮವಾರ ತಹಶೀಲ್ದಾರ್ ಎಂ.ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದರು.
‘ಕಳೆದ ಸಾಲಿನ ಮುಂಗಾರು ಬೆಳೆ ಅತಿವೃಷ್ಟಿಯಿಂದ ಹಾನಿಯಾಗಿದೆ. ಈ ವೇಳೆ ರೈತರು ಸಾಲ ಮಾಡಿ ವಿಮೆ ಕಂತು ತುಂಬಿದ್ದಾರೆ. ಆದರೆ ವರ್ಷ ಕಳೆ ಯುತ್ತ ಬಂದರೂ ವಿಮೆ ಪರಿಹಾರ ಬಂದಿಲ್ಲ’ ಎಂದು ರೈತರು ತಹಶೀಲ್ದಾರ್ ಸಮ್ಮುಖ ದಲ್ಲಿ ಆಕ್ರೋಶ ಹೊರ ಹಾಕಿದರು.
‘ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿಯೂ ಎಲ್ಲವೂ ಸರಿಯಿಲ್ಲ. ಅನೇಕ ಅರ್ಹ ಬಡ ಫಲಾನುಭವಿಗಳ ಮಾಸಾಶನ ನಿಂತು ಹೋಗಿದೆ. ಕೆಲವರಿಗೆ ನಿಯಮಿತವಾಗಿ ಮಾಸಾಶನ ಬರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಲಾಕ್ಡೌನ್ನಿಂದಾಗಿ ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರು ತೊಂದರೆಯಲ್ಲಿದ್ದಾರೆ. ಇಂತಹ ಸಂಕಷ್ಟದ ನಡುವೆ ಮಾಸಾಶನ ಸ್ಥಗಿತ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು’ ಎಂದು ಎಕಂಬಾ ಗ್ರಾಮದ ವೃದ್ಧರು ಗೋಳು ತೋಡಿಕೊಂಡರು.
‘ಯಾರ ಮಾಸಾಶನ ಬಂದಿಲ್ಲ ಎಂಬುದನ್ನು ನನಗೆ ಪಟ್ಟಿ ಕೊಡಿ. ಪರಿಶೀಲಿಸಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ತಹಶೀಲ್ದಾರ್ ಎಂ. ಚಂದ್ರಶೇಖರ್ ಭರವಸೆ ನೀಡಿದರು. ಇನ್ನು ಬೆಳೆ ವಿಮೆ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗುವುದು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಬಂಟಿ ದರಬಾರೆ, ದತ್ತಾ ಚೊಪಡೆ, ಗೋವಿಂದ ಪಾಟೀಲ, ಪ್ರಶಾಂತ ಬಿರಾದಾರ, ಮಹೇಶ ಜಾಧವ್, ಶಾಂತಕುಮಾರ ಬಿರಾದಾರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.