ಬಸವಕಲ್ಯಾಣ: ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯಸಿಂಗ್ ಅವರು ಇಲ್ಲಿನ ಶಿವಾಜಿ ಪಾರ್ಕ್ ನಲ್ಲಿ ಬೃಹತ್ ಮೂರ್ತಿ ಪ್ರತಿಷ್ಠಾಪಿಸಿ ಅಭಿವೃದ್ಧಿ ಕೈಗೊಳ್ಳಲು ₹1.50 ಕೋಟಿ ಅನುದಾನ ಒದಗಿಸಿದ್ದಾರೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ತಿಳಿಸಿದರು.
ನಗರದ ಶಿವಾಜಿ ಪಾರ್ಕ್ನಲ್ಲಿ ಮರಾಠಾ ಸಮಾಜದಿಂದ ಸೋಮವಾರ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಈ ಸಂಬಂಧ ನೀಲನಕ್ಷೆ ಸಿದ್ಧಗೊಂಡಿದ್ದು, ಕೆಲಸ ಆರಂಭ ಆಗಲಿದೆ. ಬರೀ ಮಾತಾಡಿದರೆ ಸಾಲದು, ಅಧಿಕಾರ ಸಿಕ್ಕಾಗ ಯಾರು ಏನೂ ಮಾಡಿದ್ದಾರೆ ಎಂಬುದು ಮುಖ್ಯ. ಜನರಿಗೆ ಇದೆಲ್ಲ ಗೊತ್ತಿರುತ್ತದೆ’ ಎಂದರು.
ಶಾಸಕ ಶರಣು ಸಲಗರ ಮಾತನಾಡಿ,‘ನನ್ನ ಎರಡು ಬಾರಿಯ ಗೆಲುವಿನಲ್ಲಿ ಮರಾಠಾ ಸಮಾಜದ ಪಾತ್ರ ಮುಖ್ಯವಾಗಿದೆ. ಹಿಂದಿನ ಸರ್ಕಾರದ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ ಅವರು ನಗರದಲ್ಲಿ ಶಿವಸೃಷ್ಟಿ ನಿರ್ಮಾಣಕ್ಕೆ ₹10 ಕೋಟಿ ಬಿಡುಗಡೆ ಮಾಡಿರುವ ಕುರಿತು ಸದನಕ್ಕೆ ಮಾಹಿತಿ ನೀಡಿದ್ದರು. ಆ ಹಣ ಬಂದಿಲ್ಲ ಎಂಬ ಮಾಹಿತಿ ಇದೆ. ಪಾರ್ಕ್ನಲ್ಲಿ ಮೂರ್ತಿ ಪ್ರತಿಷ್ಠಾಪನೆಗೂ ಧನಸಹಾಯ ನೀಡುತ್ತೇನೆ’ ಎಂದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ,‘ನಾನು ಶಾಸಕನಿದ್ದಾಗ ಶಿವಾಜಿ ಪಾರ್ಕ್ ನಿರ್ಮಿಸಿ ಚಿಕ್ಕ ಪ್ರತಿಮೆ ಕೂಡಿಸಿದ್ದೇನೆ. ಇಲ್ಲಿ 21 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪಿಸುವವರೆಗೂ ಇಲ್ಲಿನ ಕಾರ್ಯಕ್ರಮದಲ್ಲಿ ಪುಷ್ಪಮಾಲೆ ಹಾಕಿಸಿಕೊಳ್ಳುವುದಿಲ್ಲ ಎಂಬ ಪಣ ನನ್ನದಾಗಿದೆ. ಪ್ರಾಮಾಣಿಕ ಪ್ರಯತ್ನವಿದ್ದರೆ ಬೆಂಬಲ ನಿಶ್ಚಿತ’ ಎಂದು ಹೇಳಿದರು.
ಕರ್ನಾಟಕ ಮರಾಠಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ.ಜಿ.ಮುಳೆ ಮಾತನಾಡಿ‘ಶಿವಾಜಿ ಮತ್ತು ಅವರ ತಂದೆ ಷಹಾಜಿಯವರು ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ್ದು ಅನೇಕ ಕಡೆ ಅವರ ಸ್ಮಾರಕಗಳನ್ನು ನಿರ್ಮಿಸಬೇಕಾಗಿದೆ. ಶಿವಸೃಷ್ಟಿಯ ಕನಸು ಕೂಡ ನನ್ನದೇ’ ಎಂದರು.
ಮುಖಂಡರಾದ ಧನರಾಜ ತಾಳಂಪಳ್ಳಿ, ಅನಿಲ ಭೂಸಾರೆ, ಗಿರಿರಾಜ ಯಡಮಲ್ಲೆ, ಮಾಲಾ ನಾರಾಯಣರಾವ್, ಸದಾನಂದ ಬಿರಾದಾರ, ಗಣೇಶ ಬೆಳಂಬೆ, ವಿ.ಟಿ.ಶಿಂಧೆ ಹಾಗೂ ಸಂದೀಪ ನಾರಾಯಣಪುರ ಮಾತನಾಡಿದರು.
ಪ್ರಮುಖರಾದ ಅಂಗದರಾವ್ ಜಗತಾಪ, ಮಹಾದೇವ ಹಸೂರೆ, ದೀಪಕ ಗಾಯಕವಾಡ, ತಾತೇರಾವ ಪಾಟೀಲ, ತುಕಾರಾಮ ಮಲ್ಲಪ್ಪ, ದತ್ತಾತ್ರಿ ಧುಳೆಪಾಟೀಲ, ರಾಜೀವ ಪಾಟೀಲ ಹಳ್ಳಿ, ಶ್ರೀನಿವಾಸ ಪಾಟೀಲ, ಆನಂದ ಪಾಟೀಲ, ಓಂಪ್ರಕಾಶ ಪಾಟೀಲ, ಕಾಳಿದಾಸ ಜಾಧವ, ಜ್ಞಾನೇಶ್ವರ ಮುಳೆ, ಬಾಲಾಜಿ ಚಂಡಕಾಪುರೆ, ದೀಪಕ ನಾಗದೆ, ಸೂರಜ್ ಪಾಟೀಲ, ರಾಜೀವ ಸೂರ್ಯವಂಶಿ, ರಾಜಕುಮಾರ ಭೋಸ್ಲೆ, ಬಾಲಾಜಿ ಕಾಳೆ, ರಾಜಕುಮಾರ ವಾಡಿಕರ್ ಹಾಗೂ ಉಮೇಶ ಗೌಳಿ ಉಪಸ್ಥಿತರಿದ್ದರು.
ಶಿವಾಜಿ ಪಾರ್ಕ್ ನಿರ್ಮಾಣದ ನೀಲನಕ್ಷೆ ಬಿಡುಗಡೆಗೊಳಿಸಲಾಯಿತು.
Quote - ಹಿಂದಿನ ಸರ್ಕಾರ ಇಲ್ಲಿ 10 ಎಕರೆಯಲ್ಲಿ ಶಿವಸೃಷ್ಟಿ ನಿರ್ಮಿಸಲು ನೀಡಿದ್ದ ₹10 ಕೋಟಿ ಏಕೆ ಬಿಡುಗಡೆ ಮಾಡಿಲ್ಲ ಎಂಬುದರ ಕುರಿತು ಮುಖ್ಯಮಂತ್ರಿಯನ್ನು ಪ್ರಶ್ನಿಸಲಾಗುವುದು ಶರಣು ಸಲಗರ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.