ಜನವಾಡ: ಕೋವಿಡ್ ಕಾರಣ ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಹಿಂದುಗಡೆಯ ಅರಳು ಸಂಸ್ಥೆ ಕಚೇರಿಯಲ್ಲಿ ಐದು ಗ್ರಾಮಗಳ 50 ಹದಿಹರೆಯದ ಹೆಣ್ಣುಮಕ್ಕಳಿಗೆ ಆಹಾರಧಾನ್ಯ ಕಿಟ್ ವಿತರಿಸಲಾಯಿತು.
ಬೆಂಗಳೂರಿನ ವಿದ್ಯಾನಿಕೇತನ ಹಾಗೂ ಅರಳು ಸಂಸ್ಥೆ ವತಿಯಿಂದ ಹದಿಹರೆಯದ ಹೆಣ್ಣುಮಕ್ಕಳ ಸಬಲೀಕರಣ(ಇಮೇಜ್) ಯೋಜನೆಯಡಿ ಬೀದರ್ ತಾಲ್ಲೂಕಿನ ಕಮಠಾಣ, ಸಾತೋಳಿ, ಬುಧೇರಾ, ಅಷ್ಟೂರ ಹಾಗೂ ಅಯಾಸಪುರ ಗ್ರಾಮಗಳ ಫಲಾನುಭವಿಗಳಿಗೆ ಆಹಾರಧಾನ್ಯ ಕಿಟ್ ವಿತರಿಸಲಾಗಿದೆ ಎಂದು ಇಮೇಜ್ ಯೋಜನೆ ಜಿಲ್ಲಾ ಸಂಚಾಲಕ ಡಾ. ಕೆ.ಟಿ. ಮೆರಿಲ್ ತಿಳಿಸಿದರು.
ಕಿಟ್ 5 ಕೆ.ಜಿ ಅಕ್ಕಿ, 2 ಕೆ.ಜಿ ಬೇಳೆ, 2 ಕೆ.ಜಿ ಸಕ್ಕರೆ, 2 ಕೆ.ಜಿ. ಶೇಂಗಾ, 1 ಕೆ.ಜಿ ಸಿಹಿ ಎಣ್ಣೆ ಹಾಗೂ ಚಹಾ ಪುಡಿಗಳನ್ನು ಒಳಗೊಂಡಿದೆ ಎಂದು ಹೇಳಿದರು.
ಕೋವಿಡ್ನಿಂದ ತೊಂದರೆಗೆ ಒಳಗಾದವರಿಗೆ ವಿದ್ಯಾನಿಕೇತನ ಹಾಗೂ ಅರಳು ಸಂಸ್ಥೆ ವತಿಯಿಂದ ವಿವಿಧ ರೀತಿಯ ನೆರವು ಒದಗಿಸುತ್ತ ಬರಲಾಗಿದೆ. ಹಾಲುಣಿಸುವ ಮಕ್ಕಳ ತಾಯಂದಿರು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ, ಆಶಾ ಕಾರ್ಯಕರ್ತೆಯರು ಹಾಗೂ ಬಾಲ್ಯ ವಿವಾಹ ತಡೆ ಆಂದೋಲನದ ನಾಯಕಿಯರಿಗೆ ಸುರಕ್ಷತಾ ಸಾಮಗ್ರಿಗಳ ಕಿಟ್ ಕೊಡಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಆದರೂ, ಕೋವಿಡ್ ಸಂಪೂರ್ಣ ನಿರ್ಮೂಲನೆಯಾಗುವವರೆಗೂ ಸಾರ್ವಜನಿಕರು ಸುರಕ್ಷತಾ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಅರ್ಹರು ಕೋವಿಡ್ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಸಮುದಾಯ ಆರೋಗ್ಯ ಅಧಿಕಾರಿ ಡಾ. ಶಾಲಮ್ಮ, ಅರಳು ಸಂಸ್ಥೆಯ ಸಹ ನಿರ್ದೇಶಕಿ ಸುನಿತಾ, ಬೆಂಗಳೂರಿನ ಸೇಂಟ್ ಅಲೊಸಿಯಸ್ ಕಾಲೇಜು ವಿದ್ಯಾರ್ಥಿ ಮಾರ್ಸಿಲೊ ಕಾರ್ಲಸ್, ಸ್ವಯಂ ಸೇವಕರಾದ ಜಯಸುಧಾ ಸಾತೋಳಿ, ನಿರ್ಮಲಾ ಕಮಠಾಣ, ಸುರೇಖಾ ಯದಲಾಪುರ ಇದ್ದರು.
ಇದೇ ವೇಳೆ ಹೆಣ್ಣುಮಕ್ಕಳಿಗೆ ಕರಪತ್ರ ವಿತರಿಸಿ ಮಕ್ಕಳ ಸಹಾಯವಾಣಿ 1098 ಹಾಗೂ ಬಾಲ್ಯ ವಿವಾಹ ತಡೆ ಕುರಿತು ಜಾಗೃತಿ ಮೂಡಿಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.