ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿಹರೆಯದ ಹೆಣ್ಣುಮಕ್ಕಳಿಗೆ ಆಹಾರ ಧಾನ್ಯ ಕಿಟ್ ವಿತರಣೆ

Last Updated 10 ಜುಲೈ 2021, 11:22 IST
ಅಕ್ಷರ ಗಾತ್ರ

ಜನವಾಡ: ಕೋವಿಡ್ ಕಾರಣ ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಹಿಂದುಗಡೆಯ ಅರಳು ಸಂಸ್ಥೆ ಕಚೇರಿಯಲ್ಲಿ ಐದು ಗ್ರಾಮಗಳ 50 ಹದಿಹರೆಯದ ಹೆಣ್ಣುಮಕ್ಕಳಿಗೆ ಆಹಾರಧಾನ್ಯ ಕಿಟ್ ವಿತರಿಸಲಾಯಿತು.

ಬೆಂಗಳೂರಿನ ವಿದ್ಯಾನಿಕೇತನ ಹಾಗೂ ಅರಳು ಸಂಸ್ಥೆ ವತಿಯಿಂದ ಹದಿಹರೆಯದ ಹೆಣ್ಣುಮಕ್ಕಳ ಸಬಲೀಕರಣ(ಇಮೇಜ್) ಯೋಜನೆಯಡಿ ಬೀದರ್ ತಾಲ್ಲೂಕಿನ ಕಮಠಾಣ, ಸಾತೋಳಿ, ಬುಧೇರಾ, ಅಷ್ಟೂರ ಹಾಗೂ ಅಯಾಸಪುರ ಗ್ರಾಮಗಳ ಫಲಾನುಭವಿಗಳಿಗೆ ಆಹಾರಧಾನ್ಯ ಕಿಟ್ ವಿತರಿಸಲಾಗಿದೆ ಎಂದು ಇಮೇಜ್ ಯೋಜನೆ ಜಿಲ್ಲಾ ಸಂಚಾಲಕ ಡಾ. ಕೆ.ಟಿ. ಮೆರಿಲ್ ತಿಳಿಸಿದರು.

ಕಿಟ್ 5 ಕೆ.ಜಿ ಅಕ್ಕಿ, 2 ಕೆ.ಜಿ ಬೇಳೆ, 2 ಕೆ.ಜಿ ಸಕ್ಕರೆ, 2 ಕೆ.ಜಿ. ಶೇಂಗಾ, 1 ಕೆ.ಜಿ ಸಿಹಿ ಎಣ್ಣೆ ಹಾಗೂ ಚಹಾ ಪುಡಿಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಕೋವಿಡ್‍ನಿಂದ ತೊಂದರೆಗೆ ಒಳಗಾದವರಿಗೆ ವಿದ್ಯಾನಿಕೇತನ ಹಾಗೂ ಅರಳು ಸಂಸ್ಥೆ ವತಿಯಿಂದ ವಿವಿಧ ರೀತಿಯ ನೆರವು ಒದಗಿಸುತ್ತ ಬರಲಾಗಿದೆ. ಹಾಲುಣಿಸುವ ಮಕ್ಕಳ ತಾಯಂದಿರು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ, ಆಶಾ ಕಾರ್ಯಕರ್ತೆಯರು ಹಾಗೂ ಬಾಲ್ಯ ವಿವಾಹ ತಡೆ ಆಂದೋಲನದ ನಾಯಕಿಯರಿಗೆ ಸುರಕ್ಷತಾ ಸಾಮಗ್ರಿಗಳ ಕಿಟ್ ಕೊಡಲಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಆದರೂ, ಕೋವಿಡ್ ಸಂಪೂರ್ಣ ನಿರ್ಮೂಲನೆಯಾಗುವವರೆಗೂ ಸಾರ್ವಜನಿಕರು ಸುರಕ್ಷತಾ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಅರ್ಹರು ಕೋವಿಡ್ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

ಸಮುದಾಯ ಆರೋಗ್ಯ ಅಧಿಕಾರಿ ಡಾ. ಶಾಲಮ್ಮ, ಅರಳು ಸಂಸ್ಥೆಯ ಸಹ ನಿರ್ದೇಶಕಿ ಸುನಿತಾ, ಬೆಂಗಳೂರಿನ ಸೇಂಟ್ ಅಲೊಸಿಯಸ್ ಕಾಲೇಜು ವಿದ್ಯಾರ್ಥಿ ಮಾರ್ಸಿಲೊ ಕಾರ್ಲಸ್, ಸ್ವಯಂ ಸೇವಕರಾದ ಜಯಸುಧಾ ಸಾತೋಳಿ, ನಿರ್ಮಲಾ ಕಮಠಾಣ, ಸುರೇಖಾ ಯದಲಾಪುರ ಇದ್ದರು.

ಇದೇ ವೇಳೆ ಹೆಣ್ಣುಮಕ್ಕಳಿಗೆ ಕರಪತ್ರ ವಿತರಿಸಿ ಮಕ್ಕಳ ಸಹಾಯವಾಣಿ 1098 ಹಾಗೂ ಬಾಲ್ಯ ವಿವಾಹ ತಡೆ ಕುರಿತು ಜಾಗೃತಿ ಮೂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT